ಸೋಮವಾರಪೇಟೆ, ಜೂ. ೪ ತಾಲೂಕಿನ ಶಾಂತಳ್ಳಿ ಹೋಬಳಿಯ ಹರಗ ಗ್ರಾಮದಲ್ಲಿ ಇರುವ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಕಳೆದ ೨೦ ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ವಿದ್ಯುತ್ ಇದ್ದರೆ ಮಾತ್ರ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತದೆ. ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ರು ಆರೋಪಿಸಿದ್ದಾರೆ. ವಿದ್ಯುತ್ ಸ್ಥಗಿತಗೊಂಡರೆ ನೆಟ್‌ವರ್ಕ್ ಇರುವುದಿಲ್ಲ. ಕೇಂದ್ರದಲ್ಲಿ ಇರುವ ಜನರೇಟರ್ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಇದರಲ್ಲಿ ತಾಂತ್ರಿಕ ದೋಷವಿದೆ ಎಂದು ಅಧಿಕಾರಿಗಳು ಹೇಳುತ್ತಾರೆಯೇ ಹೊರತು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಮೊಬೈಲ್ ಬಳಕೆದಾರರು ದೂರಿದ್ದಾರೆ.

ಈ ಭಾಗದಲ್ಲಿ ಇರುವ ೨೦ ರಿಂದ ೨೫ ಗ್ರಾಮಗಳಿಗೆ ಸೇವೆ ನೀಡುತ್ತಿರುವ ಈ ನೆಟ್‌ವರ್ಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರು ಮಾತ್ರವಲ್ಲದೇ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ತಂತ್ರಜ್ಞಾನ ಮೇರುಗತಿಯಲ್ಲಿರುವ ಪ್ರಸ್ತುತತೆಯಲ್ಲಿ ಶೈಕ್ಷಣಿಕ ಕೇತ್ರವೂ ತಾಂತ್ರಿಕತೆಯ ಸ್ಪರ್ಶ ಪಡೆದಿದೆ. ಆದರೆ ಇಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶರಣ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೇನು ಮಳೆಗಾಲ ಆರಂಭಗೊಳ್ಳುತ್ತಿದ್ದು, ಹರಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸೇವೆ ಒದಗಿಸುತ್ತಿರುವ ಟವರ್ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಮಾರ್ಗವು ಅರಣ್ಯ, ತೋಟ, ಕಾಡಿನಿಂದ ಆವೃತ್ತವಾಗಿರುವ ಪ್ರದೇಶದಿಂದ ಬಂದಿದೆ. ಮಳೆಗಾಲದಲ್ಲಿ ಗಾಳಿ ಮಳೆಗೆ ಮರ-ಕೊಂಬೆಗಳು ಬಿದ್ದರೆ ವಾರಗಟ್ಟಲೆ ವಿದ್ಯುತ್ ಸ್ಥಗಿತಗೊಳ್ಳಲಿದೆ. ಮುಂಜಾಗ್ರತಾ ಕ್ರಮವಾಗಿ ಜನರೇಟರ್ ಸುಸ್ಥಿತಿಗೊಳಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದು ಹರಗ ಗ್ರಾಮದ ಪ್ರಕಾಶ್ ಒತ್ತಾಯಿಸಿದ್ದಾರೆ.