ಬೆಂಗಳೂರು, ಜೂ. ೩: ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನಟ ಕಮಲ್ ಹಾಸನ್‌ಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿತ್ತು. ಅಲ್ಲದೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಹೇಳಿದ್ದು, ಇದಕ್ಕೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಥಗ್ ಲೈಫ್ ಚಿತ್ರ ಜೂನ್ ೫ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ ೧೦ಕ್ಕೆ ಮುಂದೂಡಿದ್ದರಿAದ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಹಿನ್ನಡೆಯಾಗಿದೆ.

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿದ ಹಿನ್ನೆಲೆಯಲ್ಲಿ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಸಿಇಓ ವಿ. ನಾರಾಯಣ್ ಮೂಲಕ ಕಮಲ್ ಹಾಸನ್ ಹೈಕೋರ್ಟ್ ಮೊರೆಹೋಗಿದ್ದರು. ಏನೇ ಆದರೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ನುಡಿದಿದ್ದರು. ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ, ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ರಾಜಕೀಯ ಅಜೆಂಡಾ ಇಟ್ಟುಕೊಂಡು ಮಾಡುತ್ತಿದ್ದಾರೆ ಎಂದಿದ್ದರು. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಹೇಳಿತ್ತು.

ಇಂದು ಹೈಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಕ್ಷಮೆ ಕೇಳಿದ್ರೆ ಮಾತ್ರ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ಸಿ. ರಾಜಗೋಪಾಲಾಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು ಎಂದರು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿಯನ್ನು ಪರಿಗಣಿಸ್ತೇವೆ ಎಂದು ಹೇಳಿದರು.

ಈ ಸಂಬAಧ ಕಮಲ್ ಹಾಸನ್ ಅವರ ಸೂಚನೆ ಪಡೆದು ವಾದಿಸುವುದಾಗಿ ಪೀಠಕ್ಕೆ ತಿಳಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು, ಮಧ್ಯಾಹ್ನ ೨.೩೦ರವರೆಗೆ ಸಮಯವಕಾಶ ಕೋರಿದ್ದರು. ನಂತರದ ವಿಚಾರಣೆಯಲ್ಲಿ ಕೆಎಫ್‌ಸಿಸಿಗೆ ಕಮಲ್ ಹಾಸನ್ ಬರೆದಿರುವ ಪತ್ರವನ್ನು ಓದಿದರು. ‘ಸದ್ಯಕ್ಕೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಕಮಲ್ ಹಾಸನ್ ತೀರ್ಮಾನಿಸಿದ್ದಾರೆ. ಹೀಗಾಗಿ, ಪೊಲೀಸ್ ರಕ್ಷಣೆ ಕೋರುವುದಿಲ್ಲ, ಈ ನಡುವೆ, ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲು ಅವರು ನಿರ್ಧರಿಸಿದ್ದಾರೆ. ಕನ್ನಡ ನಾಡು ಮತ್ತು ಕರ್ನಾಟಕದ ಬಗ್ಗೆ ಪ್ರೀತಿ ಇದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ದುರುದ್ದೇಶವಿದ್ದರೆ ಮಾತ್ರ ಕ್ಷಮೆ ಕೋರಬೇಕು ಎಂದು ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಅವರು ಘೋಷಣೆ ಮಾಡಿದ್ದಾರೆ, ಸ್ಪಷ್ಟನೆ ನೀಡಿಲ್ಲ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯನ್ನು ವಿಳಂಬಿಸಬಹುದು ಎಂದಿದ್ದಾರೆ. ಹೀಗಾಗಿ, ಸಿನಿಮಾ ಬಿಡುಗಡೆಗೆ ಪೊಲೀಸರ ರಕ್ಷಣೆಯ ವಿಚಾರ ಮುಂದಿಡುವುದಿಲ್ಲ. ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ' ಎಂದು ಧ್ಯಾನ್ ಚಿನ್ನಪ್ಪ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ “ಅಹಂ ಮುಂದೆ ಮಾಡಿದ್ದೀರಿ. ಅದು ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಬಹುದು. ಇದು ಜನರ ಭಾವನೆಗಳಿಗೆ ಹಾನಿ ಮಾಡುವ ವಿಚಾರವಾಗಿದೆ. ಕಮಲ್ ಹಾಸನ್ ಹೇಳಿಕೆಯಿಂದ ಇಷ್ಟೆಲ್ಲಾ ಆಗಿದ್ದು, ಇದೆಲ್ಲವನ್ನೂ ಅವರ ಹೇಳಿಕೆಯೇ ನಿಲ್ಲಿಸಬಹುದು. ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಕ್ಷಮೆ ವಿಚಾರ ಹೊರತುಪಡಿಸಿ ಉಳಿದೆಲ್ಲವೂ ಇದೆ” ಎಂದಿದೆ. ಅಂತಿಮವಾಗಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟೀಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ ೧೦ಕ್ಕೆ ಮುಂದೂಡಿದೆ.