ಮಡಿಕೇರಿ, ಮೇ ೨೭: ಭಾರತೀಯ ಕೃಷಿ ಅನುಸಂಧಾನ ಪರಿಷತ್, ಅದರ ವಿವಿಧ ಅಂಗ ಸಂಸ್ಥೆಗಳ ಸಂಶೋಧನಾ ಕೇಂದ್ರಗಳು, ದೇಶದ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಈ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳ ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ತಾ. ೨೯ ರಿಂದ ಜೂನ್ ೧೨ ರವರೆಗೆ ಹಮ್ಮಿಕೊಳ್ಳಲಾಗಿದೆ.
ಕೃಷಿ ವಿಜ್ಞಾನ ಕೇಂದ್ರ ಮತ್ತು ಇತರ ಸಂಶೋಧನ ಕೇಂದ್ರಗಳ ವಿಜ್ಞಾನಿಗಳು, ಇಲಾಖೆಯ ಅಧಿಕಾರಿಗಳು ರೈತರ ಕಡೆ ತೆರಳಿ, ಜಿಲ್ಲೆಯ ಎಲ್ಲಾ ರೈತರಿಗೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಇಲ್ಲಿಯ ರೈತರನ್ನು ಒಗ್ಗೂಡಿಸಿ ನೂತನ ತಂತ್ರಜ್ಞಾನಗಳು, ಹೊಸ ತಳಿಗಳ ಮತ್ತು ಬೀಜಗಳ ನಿಖರವಾದ ಹವಾಮಾನ ಮಾಹಿತಿ ಮತ್ತು ಸರ್ಕಾರದ ನಾನಾ ಲಾಭದಾಯಕ ಯೋಜನೆಗಳು, ಕೃಷಿಯಲ್ಲಿ ಹೆಚ್ಚು ಲಾಭವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ರೈತರು ನೀಡುವ ಪ್ರಕ್ರಿಯೆಗಳನ್ನು ಸಂಗ್ರಹಿಸಿ ಅವರ ಹೊಸ ಆವಿಷ್ಕಾರಗಳನ್ನು ಸಂಶೋಧನೆ ಮತ್ತು ಪ್ರಸಾರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಬೆಳೆ, ಮಣ್ಣು ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ತಜ್ಞರಿಂದ ಸಲಹೆಗಳನ್ನು ನೀಡಲಾಗುತ್ತದೆ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಕೊಡಗು ಜಿಲ್ಲೆಯ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತಂಡ ಭೇಟಿ ನೀಡುವ ಬಗ್ಗೆ ಅಲ್ಲಿನ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತಂಡ ಆಯಾ ಗ್ರಾಮಗಳಿಗೆ/ ಹೋಬಳಿಗೆ ಬಂದಾಗ ಈ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು ಕಾರ್ಯಕ್ರಮದ ಲಾಭವನ್ನು ಪಡೆದು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬಹುದು ಎಂದು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.