ವೀರಾಜಪೇಟೆ, ಮೇ ೨೬ : ವೀರಾಜಪೇಟೆ ನಗರದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಪುರಸಭೆ ವತಿಯಿಂದ ಕಾಳಜಿ ಕೇಂದ್ರವನ್ನು ಸಂತ ಅನ್ನಮ್ಮ ಶಾಲೆಯಲ್ಲಿ ತೆರೆಯಲಾಗಿದೆ.
ಅಪಾಯದ ಅಂಚಿನಲ್ಲಿರುವ ಸಾರ್ವಜನಿಕರು ಇದರ ಸದು ಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಅವರು ಈಗಾಗಲೇ ಅಪಾಯದ ಅಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ತಿಳಿಸಿದ್ದಾರೆ.
ನೆಹರುನಗರ, ಅಯ್ಯಪ್ಪ ಬೆಟ್ಟದ ಮೇಲೆ ವಾಸಿಸುತ್ತಿರುವ ಕುಟುಂಬಗಳಿಗೆ ಬೆಟ್ಟ ಕುಸಿಯುವ ಭೀತಿ ಇರುವವರು ತಮಗೆ ಸುರಕ್ಷಿತವಾಗಿರುವ ಸಂಬAಧಿಕರ ಮನೆಗಳಿಗೆ ಅಥವಾ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ತಾಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ನೋಟಿಸ್ ನೀಡಲಾಗಿದೆ.
(ಮೊದಲ ಪುಟದಿಂದ) ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವವರಿಗೆ ಬೇಕಾಗುವ ಎಲ್ಲಾ ಸಿದ್ದತೆಗಳನ್ನು ಪುರಸಭೆ ವತಿಯಿಂದ ಮಾಡಲಾಗಿದೆ.
ವಿಪರೀತ ಗಾಳಿ ಮತ್ತು ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ಎಲ್ಲಿ ಹೋಗಿ ಇರುವುದು ಎನ್ನುವ ಆತಂಕದಲ್ಲಿ ಇದ್ದಾರೆ. ಎಲ್ಲ ಕಡೆ ಒಂದೇ ಸಮನೆ ಮಳೆ, ಗಾಳಿ ಬೀಸುತ್ತಾ ಇರುವುದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಆಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ.
ಮಧ್ಯಾಹ್ನದ ವೇಳೆ ವೀರಾಜಪೇಟೆ ನಗರದಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ಬಳಿಕ ಬಿರುಸು ಪಡೆದುಕೊಂಡಿತು. ನಿರಂತರವಾಗಿ ಮಳೆ ಸುರಿಯುತ್ತಾ ಇರುವುದರಿಂದ ಪಟ್ಟಣದ ಮಟನ್ ಮಾರ್ಕೇಟ್ ಬಳಿಯಲ್ಲಿನ ರಾಜ ಕಾಲುವೆ ತುಂಬಿ ಹರಿಯುತ್ತಿತ್ತು. ಗಾಳಿ ಜೋರಾಗಿ ಬೀಸುತ್ತಿದ್ದರಿಂದ ಅಲ್ಲಲ್ಲಿ ಕರೆಂಟ್ ಕಂಬಗಳು, ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ತೆರದ ಬಾವಿ ಕುಸಿತಗೊಂಡಿವೆ.
ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಅಧ್ಯಕ್ಷರು, ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಸೂಚನೆ : ಕೊಡಗಿನಲ್ಲಿ ಮಳೆ ಜೋರಾಗಿರುವುದರಿಂದ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಸಾರ್ವಜನಿಕರು ಬಿದ್ದ ಕಂಬಗಳ ಹತ್ತಿರ ಹೋಗದಂತೆ ಮತ್ತು ತಂತಿಗಳನ್ನು ಮುಟ್ಟದಂತೆ ಸೂಚನೆ ನೀಡಲಾಗಿದೆ. ಅಂತಹ ಸಂದರ್ಭದಲ್ಲಿ ತಕ್ಷಣವೇ ಶಾಖಾಧಿಕಾರಿಗಳಿಗೆ, ಲೈನ್ ಮ್ಯಾನುಗಳಿಗೆ ಕರೆ ಮಾಡಿ ವಿಷಯ ತಿಳಿಸಿ ಇಲ್ಲವೇ ವಿದ್ಯುತ್ ಗ್ರಾಹಕ ಸಹಾಯವಾಣಿ ದೂರವಾಣಿ ಸಂಖ್ಯೆ ೧೯೧೨ ಗೆ ಕರೆಮಾಡಿ ಮಾಹಿತಿ ಕೊಡುವಂತೆ ಸೂಚನೆ ನೀಡಲಾಗಿದೆ.