ಮಡಿಕೇರಿ, ಮೇ ೨೩: ಕೊಡವ ಸಾಹಿತ್ಯ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ, ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮೈಸೂರು ಕೊಡವ ಸಮಾಜದಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಚೆಕ್ಕೆರ ತ್ಯಾಗರಾಜ ಅವರ ಕಲಾ ಸೇವೆ ಅಪಾರವಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.

ಹಿರಿಯ ಕಲಾವಿದ ಹಾಗೂ ಆಯೋಜಕ ನೆರವಂಡ ಉಮೇಶ್ ಮಾತನಾಡಿ ತ್ಯಾಗರಾಜ ಅವರಂತೆ ಅವರ ತಂದೆ ಅಪ್ಪಯ್ಯ ಅವರು ಕೂಡ ಕಲಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಕೊಡಗಿನಿಂದ ಮದ್ರಾಸ್‌ವರೆಗೆ ಪ್ರಯಾಣ ಬೆಳೆಸಿ ಕಲಾ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಉದ್ಯಮಿ ಪೊನ್ನಚೆಟ್ಟಿರ ರಮೇಶ್ ಮಾತನಾಡಿ ಕಲಾವಿದರ ಸಂಘದ ಸದಸ್ಯತ್ವವನ್ನು ಹೆಚ್ಚಿಸಬೇಕು, ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದೇ ಜೂನ್ ತಿಂಗಳಿನಲ್ಲಿ ಬೆಂಗಳೂರು ಕೊಡವ ಸಮಾಜದಲ್ಲಿ ಕಲಾ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸರ್ವರು ಕೈ ಜೋಡಿಸುವಂತೆ ಕೋರಿದರು.

ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ವಿಠಲ್ ನಂಜಪ್ಪ ಅವರು ಕಲಾವಿದ ತ್ಯಾಗರಾಜ ಅವರ ಸಂಗೀತ ಕ್ಷೇತ್ರದ ಸಾಧನೆಯ ಬಗ್ಗೆ ವಿವರಿಸಿ, ತ್ಯಾಗರಾಜರ ಕುರಿತು ಸಾಕ್ಷö್ಯಚಿತ್ರ ತಯಾರಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಸೃಷ್ಟಿ ಕೊಡವ ರಂಗದ ನಿರ್ದೇಶಕಿ ಅಡ್ಡಂಡ ಸಿ. ಅನಿತಾ ಕಾರ್ಯಪ್ಪ ಅವರು ಮಾತನಾಡಿ ಚೆಕ್ಕೆರ ತ್ಯಾಗರಾಜರ ಸಂಗೀತ ಪ್ರೀತಿಯ ಬಗ್ಗೆ ಮಾಹಿತಿಯಿತ್ತರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ಯಾಗರಾಜ ಅವರು ಕೊಡಗು ಕಲಾವಿದರ ಸಂಘ ಎಲೆಮರೆಯ ಕಾಯಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುವ ಮತ್ತು ಸನ್ಮಾನಿಸುವ ಮಹಾಕಾರ್ಯ ಮಾಡುತ್ತಿದೆ. ನನ್ನನ್ನು ಗುರುತಿಸಿ ಮೈಸೂರಿಗೆ ಬಂದು ಸನ್ಮಾನಿಸಿ ಗೌರವಿಸಿರುವುದು ಸಂತಸ ಮೂಡಿಸಿದೆ ಎಂದರು.

ಮೈಸೂರು ಕೊಡವ ಸಮಾಜದ ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ ಹಾಗೂ ಕಾರ್ಯದರ್ಶಿ ಕೇಟೋಳಿರ ರವಿ ಮಾತನಾಡಿದರು.

ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಕಲಾವಿದರಾದ ನೆರವಂಡ ಉಮೇಶ್, ಅಲ್ಲಾರಂಡ ವಿಠ್ಠಲ್ ನಂಜಪ್ಪ, ಕಾಡ್ಯಮಾಡ ಸುಮನ್, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲ ನಾಣಯ್ಯ, ಕಾಳಿಮಾಡ ದಿನೇಶ್ ನಾಚಪ್ಪ, ಪೋಡಮಾಡ ಭವಾನಿ ನಾಣಯ್ಯ, ಈರಮಂಡ ವಿಜಯ್ ಮತ್ತಿತರರು ಚೆಕ್ಕೆರ ತ್ಯಾಗರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪೊಡಮಾಡ ಭವಾನಿ ನಾಣಯ್ಯ ಅವರು ಒಡಿಕತ್ತಿ, ಕಾಳಿಮಾಡ ದಿನೇಶ್ ಹಾಗೂ ಅಲ್ಲಾರಂಡ ವಿಠಲ್ ನಂಜಪ್ಪ ಅವರು ತ್ಯಾಗರಾಜರ ಭಾವಚಿತ್ರವನ್ನು ನೀಡಿದರು.

ಹಿರಿಯ ಕಲಾವಿದ ತ್ಯಾಗರಾಜ ಅವರು ತಮ್ಮೊಂದಿಗೆ ತಂದಿದ್ದ ಹಾರ್ಮೋನಿಯಂನ್ನು ನುಡಿಸಿ ಅಂಬಿಕಾ... ಅಂಬಿಕಾ... ಹಾಡನ್ನು ಹಾಡಿ ರಂಜಿಸಿದರು.

ಕಲಾವಿದರಾದ ಬಯವಂಡ ಬಿನು ಸಚಿನ್, ಪೊಡಮಾಡ ಭವಾನಿ ನಾಣಯ್ಯ, ಮಾಳೇಟಿರ ಅಜಿತ್, ಸೋಮೆಯಂಡ ಬೋಸ್ ಸೋಮಯ್ಯ ಮತ್ತಿತರರು ಹಾಡುಗಳನ್ನು ಹಾಡಿದರು.

ಕಲಾವಿದರಾದ ಕಾಡ್ಯಮಾಡ ಸುಮನ್, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲ ನಾಣಯ್ಯ, ಕಾಳಿಮಾಡ ದಿನೇಶ್ ನಾಚಪ್ಪ, ಪೊಡಮಾಡ ಭವಾನಿ ನಾಣಯ್ಯ, ಈರಮಂಡ ವಿಜಯ್, ಖ್ಯಾತ ಯೂಟ್ಯೂಬರ್ ಕಳ್ಳಿಚಂಡ ಡಿಂಪಲ್ ನಾಚಪ್ಪ, ಮಲ್ಲಮಾಡ ಶ್ಯಾಮಲ, ಕುಪ್ಪಣಮಾಡ ಜಾನ್ಸಿ, ಆಚಿಯಡ ಗಗನ್ ಗಣಪತಿ, ಬಿದ್ದಂಡ ಉತ್ತಮ್, ಬಲ್ಯಂಡ ವರ್ಷ (ವಿಜಯ್) ಸೇರಿದಂತೆ ಕೊಡಗು ಹಾಗೂ ಮೈಸೂರಿನ ಕಲಾವಿದರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಚೆರುವಾಳಂಡ ಸುಜಲ ನಾಣಯ್ಯ ಪ್ರಾರ್ಥಿಸಿ, ತಾತಂಡ ಪ್ರಭಾ ನಾಣಯ್ಯ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ನಿರೂಪಿಸಿ, ಈರಮಂಡ ವಿಜಯ್ ವಂದಿಸಿದರು.