ಶ್ರೀಮಂಗಲ, ಮೇ ೨೩: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಬೆಳೆಗಾರ ಅಪ್ಪಚಂಗಡ ಬೋಪಯ್ಯ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ಬೆನ್ನಲ್ಲೇ ಸ್ಥಳಕ್ಕೆ ರಾಜ್ಯ ವನ್ಯಜೀವಿ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಹಸುವಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಹುಲಿಯ ಹೆಜ್ಜೆ ಗುರುತು ಪತ್ತೆಹಚ್ಚಿ ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಹಸುವಿಗೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಬಿ. ಜಿ. ಗಿರೀಶ್ ಚಿಕಿತ್ಸೆ ಪ್ರಾರಂಭಿಸಿದ್ದು, ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಮಳೆ ಆರಂಭವಾಗಿದ್ದು ಇದರ ನಡುವೆಯೂ ಹುಲಿಯ ಹೆಜ್ಜೆ ಗುರುತು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಲಾಗಿದೆ. ಚಲನವಲನ ಗುರುತಿಸಲು ಹಲವಾರು ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.

ಇದೇ ಸಂದರ್ಭ ಹುದಿಕೇರಿ ಸಮೀಪ ಕೋಣಗೇರಿ ಗ್ರಾಮದಲ್ಲಿ ಬೆಳೆಗಾರ ಅಜ್ಜಿಕುಟ್ಟಿರ ಗಿರೀಶ್ ಅವರ ಹುಸುವನ್ನು ಹುಲಿ ಕೊಂದಿರುವ ಸ್ಥಳಕ್ಕೆ ಸಂಕೇತ್ ಪೂವಯ್ಯ ಭೇಟಿ ನೀಡಿದರು.

ಈ ಸಂದರ್ಭ ಸ್ಥಳೀಯ ಪ್ರಮುಖ ಅಪ್ಪಚಂಗಡ ಮೋಟಯ್ಯ, ಪೊನ್ನಂಪೇಟೆ ಡಿಆರ್‌ಎಫ್‌ಓ ನಾಗೇಶ್, ಅರಣ್ಯ ಗಸ್ತುಪಾಲಕ ಎಸ್ ಹನುಮೇಗೌಡ, ಮಣಿಕಂಠ, ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳಾದ ಶಶಾಂಕ್, ಶೈಲೇಶ್, ಪುನೀತ್, ಚಾಲಕರಾದ ಸಿಕಂದರ್, ಹರೀಶ್,ಸ್ಥಳೀಯರಾದ ಅಪ್ಪಚಂಗಡ ಬಬಿನ್ ಬೆಳ್ಳಿಯಪ್ಪ ಮತ್ತಿತರರು ಇದ್ದರು.

-ಹರೀಶ್ ಮಾದಪ್ಪ