ಸೋಮವಾರಪೇಟೆ, ಮೇ ೨೨: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದೊಡ್ಡಮನೆಕೊಪ್ಪ ಗ್ರಾಮದ ಮೇಲ್ಭಾಗದಲ್ಲಿರುವ ಮೂಕ್ರಿಗುಡ್ಡ-ದೊಡ್ಡಮನೆಕೊಪ್ಪ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲುಗಳು ಕೆಳಭಾಗದ ಕಾಫಿ ತೋಟಗಳಿಗೆ ಉರುಳಿ ಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಸಕ್ತ ವರ್ಷದ ಮಳೆಗೆ ಮಣ್ಣು ಸಡಿಲಗೊಂಡು ಬೃಹತ್ ಗಾತ್ರದ ಹತ್ತಾರು ಕಲ್ಲುಗಳು ಕಾಫಿ ತೋಟದೊಳಗೆ ಉರುಳಿ ಬಂದಿರುವ ಹಿನ್ನೆಲೆ, ಭಯಭೀತರಾದ ಸ್ಥಳೀಯ ಕೃಷಿಕರು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮೂಕ್ರಿ ಗುಡ್ಡದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಕಲ್ಲುಗಣಿಕಾರಿಕೆ ನಡೆದಿದ್ದು, ನಂತರ ಪರಿಸರವಾದಿಗಳ ವಿರೋಧ ಮತ್ತು ಹೋರಾಟದಿಂದ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿತ್ತು. ಬೆಟ್ಟದ ಮೇಲಿದ್ದ ಬೃಹತ್ ಬಂಡೆಗಳಿAದ ಒಡೆದ ಹಲವಾರು ಕಲ್ಲುಗಳು ಬಾಕಿಯಾಗಿದ್ದವು, ಅವುಗಳಲ್ಲಿ ಕೆಲವು ಕಲ್ಲುಗಳು ಇದೀಗ ಕಾಫಿ ತೋಟದೊಳಗೆ ಉರುಳಿ ಮರ ಗಿಡಗಳಿಗೆ ಹಾನಿಯಾಗುತ್ತಿದೆ. ಇದರೊಂದಿಗೆ ತೋಟದಲ್ಲಿ ಕೆಲಸ ನಿರ್ವಹಿಸಲು ಆತಂಕ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಪರಿವೀಕ್ಷಕ ದಾಮೋಧರ್ ಹಾಗು ಗ್ರಾಮಲೆಕ್ಕಿಗ
(ಮೊದಲ ಪುಟದಿಂದ) ಕರಿಬಸಪ್ಪ ಅವರುಗಳು ಸ್ಥಳ ಪರಿಶೀಲನೆ ಮಾಡಿದರು. ಕಲ್ಲು ಉರುಳಿರುವ ಜಾಗದಲ್ಲಿ ಮನೆಗಳಿಲ್ಲದ ಕಾರಣ ಸದ್ಯಕ್ಕೆ ಸಮಸ್ಯೆಯಿಲ್ಲ. ಬೆಟ್ಟದಿಂದ ೨೦೦ ಮೀಟರ್ನಷ್ಟು ಕೆಳಭಾಗಕ್ಕೆ ಕಲ್ಲುಗಳು ಉರುಳಿವೆ. ಮನೆಗಳ ಸಮಾನಾಂತರವಾಗಿ ಯಾವುದೇ ಕಲ್ಲುಗಳಿಲ್ಲ. ಗ್ರಾಮವಾಸಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕಂದಾಯ ಅಧಿಕಾರಿ ದಾಮೋಧರ್ ಅಭಿಪ್ರಾಯಿಸಿದ್ದಾರೆ.
ಕಲ್ಲುಗಳು ತೋಟದೊಳಗೆ ಉರುಳಿ ಬಂದಿರುವ ಬಗ್ಗೆ ತಹಶೀಲ್ದಾರ್ ಮತ್ತು ಭೂಗರ್ಭ ಶಾಸ್ತçಜ್ಞರಿಗೆ ವರದಿ ಸಲ್ಲಿಸಿದ್ದು, ಮೇಲಧಿಕಾರಿಗಳು ಸ್ಥಳಪರಿಶೀಲನೆ ಮಾಡಲಿದ್ದಾರೆ. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ ಸಂದರ್ಭ ಗ್ರಾಮಸ್ಥರಾದ ನಾಗರಾಜು, ಧರ್ಮಪ್ಪ, ಡಿ.ಕೆ. ಉಮೇಶ್, ಶಂಕರಪ್ಪ, ಲಕ್ಷö್ಮಣ, ಕೃಷ್ಣಪ್ಪ ಸೇರಿದಂತೆ ಇತರರು ಸ್ಥಳದಲ್ಲಿದ್ದು, ಘಟನೆಯ ಮಾಹಿತಿ ಒದಗಿಸಿದರು.