ಮಡಿಕೇರಿ, ಮೇ ೨೨: ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಭ್ರಷ್ಟಾಚಾರ ನಡೆದಿದ್ದು, ಪ್ರಸ್ತುತವೂ ಮುಂದುವರೆದಿದೆ ಎಂದು ಆರೋಪಿಸಿರುವ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಈ ಬಗ್ಗೆ ಸರ್ಕಾರ ತನಿಖೆಗೆ ಮುಂದಾಗಬೇಕೆAದು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಅರಣ್ಯ ಇಲಾಖೆಗೆ ಕಂದಕ ನಿರ್ಮಾಣ, ಗಿಡ ನೆಡುವುದು ಸೇರಿದಂತೆ ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ. ಆದರೆ ಆ ಅನುದಾನಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆಯೆ ಎಂಬ ಸಂಶಯ ಮೂಡುತ್ತಿದೆ. ಯೋಜನೆಗಳು ಸಮರ್ಪಕವಾಗಿ ಜಾರಿಯಾಗದ ಬಗ್ಗೆ ಹಾಗೂ ನಿರ್ವಹಣೆಯಾಗದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅರಣ್ಯ ಇಲಾಖೆ ಅನುದಾನದ ಬಳಕೆ ಬಗ್ಗೆ ಯಾರಿಗೆ ಲೆಕ್ಕ ತೋರಿಸುತ್ತಿದೆ; ಯಾರು ಅದನ್ನು ಲೆಕ್ಕ ಮಾಡುತ್ತಿದ್ದಾರೆ ಎಂಬದೇ ತಿಳಿಯುತ್ತಿಲ್ಲ. ಆದ್ದರಿಂದ ಸರ್ಕಾರದಿಂದ ಅರಣ್ಯ ಇಲಾಖೆಯ ಒಳಗಿನ ಭ್ರಷ್ಟಾಚಾರದ ಬಗ್ಗೆ ವೈಜ್ಞಾನಿಕ ತನಿಖೆ ಆಗಬೇಕೆಂದು ಒತ್ತಾಯಿಸಿದ ಸಂಕೇತ್ ಪೂವಯ್ಯ ಪ್ರಸ್ತುತ ವೀರಾಜಪೇಟೆ ಶಾಸಕರಾಗಿರುವ ಪೊನ್ನಣ್ಣ ಅವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.

ವಿಶೇಷ ದಳ ರಚಿಸಬೇಕು : ಈಗಾಗಲೇ ಎರಡು ಹುಲಿಗಳನ್ನು ಸೆರೆಹಿಡಿಯಲು ಶಾಸಕರು ಅನುಮತಿ ಕೊಡಿಸಿದ್ದಾರೆ ಆದರೆ ಅರಣ್ಯ ಇಲಾಖೆ ಇನ್ನೂ ಕೂಡ ಹುಲಿ ಸೆರೆಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಉಪಟಳ ನೀಡುವ ವನ್ಯಪ್ರಾಣಿಗಳ ಸೆರೆಗೆ ಸಂಬAಧಿಸಿದವರಿAದ ಅನುಮತಿ ಸಿಕ್ಕಿದ ಕೂಡಲೇ ಅವುಗಳನ್ನು ಸೆರೆಹಿಡಿಯಲು ವಿಶೇಷ ದಳವೊಂದನ್ನು ರಚನೆ ಮಾಡಬೇಕು ಹಾಗೂ ಇಂತಿಷ್ಟು ಸಮಯದೊಳಗೆ ವನ್ಯಪ್ರಾಣಿಗಳನ್ನು ಸೆರೆ ಹಿಡಿಯಲೇಬೇಕೆಂದು ವಿಶೇಷದಳಕ್ಕೆ ಸೂಚನೆ ನೀಡು ವಂತಾಗಬೇಕೆAದು ಸಂಕೇತ್ ಪೂವಯ್ಯ ಹೇಳಿದರು.

(ಮೊದಲ ಪುಟದಿಂದ)

ಕಾನೂನುಗಳಲ್ಲಿ ಮಾರ್ಪಾಡಾಗಬೇಕು

ವನ್ಯಪ್ರಾಣಿಗಳ ಹಾವಳಿಯಿಂದ ಆದಿವಾಸಿಗಳು ಶ್ರಮಜೀವಿಗಳು ಸಣ್ಣ ರೈತರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಸಂಬAಧ ಈಗಾಗಲೇ ಶಾಸಕ ಪೊನ್ನಣ್ಣ ಅವರು ಸರ್ಕಾರದ ಮಟ್ಟದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಸದನದಲ್ಲಿ ಶಾಸಕರುಗಳಾದ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆನೆ ಮಾನವ ಸಂಘರ್ಷದ ವಿಚಾರದಲ್ಲಿ ವೈಜ್ಞಾನಿಕ ಪರಿಹಾರಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ಶಾಸಕರುಗಳು, ಸಂಸದರು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ವನ್ಯಪ್ರಾಣಿ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಸಂಬAಧ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ಕಾನೂನುಗಳಲ್ಲಿ ಮಾರ್ಪಾಡು ತರಲು ಶಾಸಕರು; ಕೇಂದ್ರ ಸರ್ಕಾರದ ಕಾನೂನುಗಳಲ್ಲಿ ಮಾರ್ಪಾಡು ತರಲು ಸಂಸದರು ಗಮನಹರಿಸಬೇಕು. ಆ ಮೂಲಕ ಕಾನೂನುಗಳಲ್ಲಿ ಮಾರ್ಪಾಡಾಗಬೇಕು. ಇಲ್ಲವಾದರೆ ಜೀವಹಾನಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಂಕೇತ್ ಪೂವಯ್ಯ ಅಭಿಪ್ರಾಯಿಸಿದರು.

ಇಚ್ಚಾಶಕ್ತಿಯಿಂದ ಕೆಲಸ ಮಾಡಿ

ಜಿಲ್ಲೆಯ ಅರಣ್ಯ ಇಲಾಖೆಯಲ್ಲಿನ ಅಧಿಕಾರಿ ಸಿಬ್ಬಂದಿಗಳ ಪೈಕಿ ಅರ್ಧದಷ್ಟು ಮಂದಿ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಉಳಿದ ಬಹಳಷ್ಟು ಮಂದಿ ಇಚ್ಚಾಶಕ್ತಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ ಸಂಕೇತ್, ಕೊಡಗಿನಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ಸಮಸ್ಯೆ ಗಂಭೀರವಾಗಿದೆ. ಆದ್ದರಿಂದ ಆಸಕ್ತಿಯಿಂದ ಕೆಲಸ ಮಾಡುವ ಮನಸ್ಸಿದ್ದರೆ ಮಾತ್ರ ಅಧಿಕಾರಿ, ಸಿಬ್ಬಂದಿ ಕೊಡಗಿಗೆ ಬನ್ನಿ. ಆರಾಮವಾಗಿ ಕಾಲ ಕಳೆಯುವ ಉದ್ದೇಶವಿದ್ದರೆ ಕೊಡಗಿಗೆ ಬರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲವು ಅಧಿಕಾರಿಗಳು ಐದು ಹತ್ತು ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದು ಅವರುಗಳನ್ನು ವರ್ಗಾವಣೆ ಮಾಡುವ ಕೆಲಸವೂ ಆಗಬೇಕಿದೆ ಎಂದರು.