- ಅನಿಲ್ ಎಚ್.ಟಿ.

ಮಡಿಕೇರಿ, ಮೇ ೨೧ : ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಇಂಗ್ಲೀಷ್‌ಗೆ ಅನುವಾದಿಸಿದ್ದ ಮಡಿಕೇರಿಯ ಲೇಖಕಿ ದೀಪಾ ಪ್ರಕಾಶ್ ಭಾಸ್ತಿ ಅವರ ‘ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದ್ದು ಇದೇ ಮೊದಲ ಬಾರಿಗೆ ಭಾರತೀಯ ಲೇಖಕಿಯರಿಗೆ ಈ ಪ್ರಶಸ್ತಿ ಲಭಿಸಿದ ಕೀರ್ತಿಗೆ ಇವರುಗಳು ಪಾತ್ರರಾಗಿದ್ದಾರೆ.

ಪುಸ್ತಕಲೋಕದಲ್ಲಿಯೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿರುವ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿಗೆ ಜಗತ್ತಿನಾದ್ಯಂತ ೧೫೩ ಪುಸ್ತಕಗಳು ವಿವಿಧ ಭಾಷೆಗಳಲ್ಲಿ ಬಂದಿದ್ದವು. ಈ ಪೈಕಿ ೧೩ ಕೃತಿಗಳು ಪ್ರಶಸ್ತಿಯ ಮಾಪನಕ್ಕೆ ಅರ್ಹತೆ ಪಡೆದು ಅಂತಿಮವಾಗಿ ೬ ಕೃತಿಗಳು ಮಾತ್ರ ಅಂತಿಮ ಹಂತದ ಆಯ್ಕೆಗೆ ಬಂದಿದ್ದವು.

ಲAಡನ್‌ನಲ್ಲಿರುವ ಟೇಟ್ ಮಾಡ್ರನ್ ಸಭಾಂಗಣದಲ್ಲಿ ಭಾರತೀಯ ಕಾಲಮಾನದ ಬೆಳಗ್ಗಿನ ಜಾವ ೨.೩೦ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಬಾನುಮುಷ್ತಾಕ್ ಮತ್ತು ದೀಪಾ ಭಾಸ್ತಿಯವರ ‘ಹಾರ್ಟ್ ಲ್ಯಾಂಪ್’ ಕೃತಿಗೆ ಈ ಬಾರಿಯ ಪ್ರಶಸ್ತಿ ಘೋಷಿಸಲ್ಪಟ್ಟಿತು. ೫೦ ಸಾವಿರ ಪೌಂಡ್ ಅಂದರೆ ಭಾರತೀಯ ಮೌಲ್ಯದಲ್ಲಿ ೫೭ ಲಕ್ಷ ರೂ. ಗಳು ಪ್ರಶಸ್ತಿ ಜೊತೆಗೆ ಲಭಿಸಿದ್ದು ಈ ಹಣವನ್ನು ಈರ್ವರೂ

(ಮೊದಲ ಪುಟದಿಂದ) ವಿಜೇತರು ಸಮಾನಾಗಿ ಹಂಚಿಕೊಳ್ಳಲಿದ್ದಾರೆ.

‘ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯ ಮೂಲಕ ದೀಪಾಭಾಸ್ತಿ, ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಡಿಕೇರಿಯ ರೈಫಲ್ ರೇಂಜ್‌ನಲ್ಲಿರುವ ದೀಪಾಭಾಸ್ತಿ, ಡಾ. ನಂಜುAಡೇಶ್ವರ ಮೊಮ್ಮಗಳಾಗಿದ್ದು, ಪ್ರಕಾಶ್ ಭಾಸ್ತಿ ಮತ್ತು ಸುಧಾ ಭಾಸ್ತಿ ಪುತ್ರಿ. ದೀಪಾ ಮಾದಾಪುರದಲ್ಲಿನ ಕಾಫಿ ಬೆಳೆಗಾರ ಚೆಟ್ಟೀರ ನಾಣಯ್ಯ ಅವರ ಪತ್ನಿ. ಕಾಲೇಜು ದಿನಗಳಿಂದಲೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ದೀಪಾ ಭಾಸ್ತಿ ಕೊಡಗು ವಿದ್ಯಾಲಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಬಳಿಕ ಮಂಗಳೂರಿನ ಮಂಗಳಗAಗ್ರೋತಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಪಡೆದಿದ್ದಾರೆ. ಶಕ್ತಿ ಪತ್ರಿಕೆಯಲ್ಲಿ ಪತ್ರಿಕೋದ್ಯಮದ ತರಬೇತಿಯನ್ನು ಕೆಲದಿನಗಳು ಪಡೆದ ದೀಪಾ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಉದ್ಯೋಗದಲ್ಲಿದ್ದು, ನಂತರ ದಿ ಹಿಂದೂ ಪತ್ರಿಕೆಗೂ ಹವ್ಯಾಸಿ ಲೇಖಕಿಯಾಗಿದ್ದರು. ಜಗತ್ತಿನ ಹತ್ತಾರು ಪತ್ರಿಕೆಗಳಲ್ಲಿ ದೀಪಾ ಬರೆದ ಲೇಖನಗಳು ಓದುಗರಿಂದ ಮನ್ನಣೆ ಗಳಿಸಿವೆ. ಶಿವರಾಮ ಕಾರಂತರ ಕೃತಿಗಳು ಮತ್ತು ಕೊಡಗಿನ ಗೌರಮ್ಮ ಅವರ ಕೃತಿಗಳನ್ನು ದೀಪಾಭಾಸ್ತಿ ಈ ಮೊದಲು ಇಂಗ್ಲೀಷ್‌ಗೆ ತರ್ಜುಮೆ ಮಾಡಿದ್ದರು.

ಬಾನುಮುಷ್ತಾಕ್ ಅವರ ಕಥೆಗಳನ್ನು ಗಮನಿಸಿದ್ದ ದೀಪಾಭಾsÀಸ್ತಿ, ತಾನಾಗಿಯೇ ಈ ಕಥೆಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದ್ದು ಇದೀಗ ದೀಪಾ ಅವರ ಅನುವಾದಿತ ಕೃತಿಗೆ ಜಾಗತಿಕ ಮನ್ನಣೆ ಲಭಿಸಿದಂತಾಗಿದೆ.

ಭಾನುಮುಷ್ತಾಕ್ ಅವರು ಬರೆದ ೫೦ ಕಥೆಗಳ ಪೈಕಿ ೧೨ ಕಥೆಗಳನ್ನು ದೀಪಾಭಾಸ್ತಿ ಆಯ್ಕೆ ಮಾಡಿಕೊಂಡು ಇಂಗ್ಲೀಷ್‌ಗೆ ಅನುವಾದಿಸಿದ್ದು ಇದು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಪುಸ್ತಕವಾಗಿ ಮುದ್ರಿತವಾಗಿತ್ತು.

ಪ್ರಶಸ್ತಿಯ ಅಂತಿಮ ಘಟ್ಟಕ್ಕೆ ಆರು ಕೃತಿಗಳು ತಲುಪಿದ್ದವು. ಅವುಗಳ ಪೈಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ. ‘ಹಾರ್ಟ್ ಲ್ಯಾಂಪ್’ ಕೃತಿಯು ೧೨ ಕಥೆಗಳ ಗುಚ್ಛವಾಗಿದೆ. ೧೯೯೦ ಹಾಗೂ ೨೦೨೩ರ ನಡುವೆ ಪ್ರಕಟವಾಗಿದ್ದ ೧೨ ಕತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ದೀಪಾ ಭಾಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಇದೇ ಕೃತಿಯು ಕಳೆದ ವರ್ಷ ಪೆನ್ ಟ್ರಾನ್ಸೆಟ್ಸ್ ಪ್ರಶಸ್ತಿಯನ್ನೂ ಪಡೆದಿತ್ತು. ಬೂಕರ್ ಪ್ರಶಸ್ತಿಯ ಅಂತಿಮ ಹಂತದಲ್ಲಿದ್ದ ಆರು ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಎರಡು ಫ್ರೆಂಚ್ ಮತ್ತು ಡ್ಯಾನಿಶ್, ಇಟಾಲಿಯನ್, ಕನ್ನಡ ಮತ್ತು ಜಪಾನಿ ಭಾಷೆಯ ತಲಾ ಒಂದು ಕೃತಿಗಳಿದ್ದವು.

‘ದೀಪಾ ಸಾಕಷ್ಟು ಶ್ರಮ ಪಟ್ಟಿದ್ದಾಳೆ. ಅನೇಕ ದಿನಗಳು ಮಧ್ಯರಾತ್ರಿಯಾದರೂ ನಿದ್ದೆ ಮಾಡದೇ ಅನುವಾದದಲ್ಲಿ ಆಕೆ ತೊಡಗಿಸಿಕೊಂಡಿದ್ದಳು. ಕೊನೆಗೂ ಮಗಳ ಶ್ರಮಕ್ಕೆ ಜಾಗತಿಕ ಪ್ರಶಸ್ತಿ ಲಭಿಸಿದ್ದು ಹೆಮ್ಮೆ ತಂದಿದೆ’ ಎಂದು ತಾಯಿ ಸುಧಾ ಭಾಸ್ತಿ ‘ಶಕ್ತಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದರು.

ತಾ. ೧೫ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ದೀಪಾ ಭಾಸ್ತಿ ಲಂಡನ್‌ಗೆ ತೆರಳಿದ್ದು ಈ ಮಾಸಾಂತ್ಯದಲ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ.

‘ಹಾರ್ಟ್ ಲ್ಯಾಂಪ್’ ಕೃತಿಯು ಪ್ರಶಸ್ತಿಗೆ ಅತ್ಯಂತ ಅರ್ಹವಾಗಿರುವ ಕೃತಿಯಾಗಿದ್ದು ದೀಪಾಭಾಸ್ತಿಯವರ ಅನುವಾದ ಕೃತಿಯನ್ನು ಮೌಲ್ಯಯುತಗೊಳಿಸಿದೆ. ಕನ್ನಡದ ಅನುವಾದವಾಗಿದ್ದರೂ ಮಹಿಳೆಯ ಜೀವನವನ್ನು ಗಾಢವಾಗಿ ಓದುಗರ ಮುಂದಿಟ್ಟ ಕೃತಿಯಾಗಿದೆ ಎಂದು ಪ್ರಶಸ್ತಿಯ ಮುಖ್ಯ ತೀರ್ಪುಗಾರರಾದ ಮ್ಯಾಕ್ಸ್ ಪೋರ್ಟರ್ ಅಭಿಪ್ರಾಯಪಟ್ಟಿದ್ದು ಕೂಡ ದೀಪಾ ಬರಹಗಾರಿಕೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ.

ಭಾನು ಮುಷ್ತಾಕ್ ಅವರ ಎದೆಯ ಹಣತೆ ಎಂಬ ಕನ್ನಡದ ಕಥಾಸಂಕಲನವನ್ನು ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಇಂಗ್ಲೀಷ್‌ಗೆ ಅನುವಾದಿಸುವ ಮೂಲಕ ಲಂಡನ್‌ನಲ್ಲಿ ಪ್ರಶಸ್ತಿಯ ತೀರ್ಪುಗಾರರ ಮನಸೆಳೆದ ತರ್ಜುಮೆ ಮಾಡಿದ ಮಡಿಕೇರಿಯ ದೀಪಾ ಭಾಸ್ತಿಯವರ ಈ ಅನುದಾವವೇ ಜಾಗತಿಕ ಮಟ್ಟದಲ್ಲಿ ಭಾರತೀಯ ಭಾಷಾ ಕೃತಿಗೆ ಮನ್ನಣೆ ಸಲ್ಲುವಂತೆ ಮಾಡಿತು ಎಂಬುದೇ ಕೊಡಗಿಗೆ ಹೆಮ್ಮೆಯ ವಿಷಯ.