ಮಡಿಕೇರಿ, ಮೇ ೨೧: ಬೇಸಿಗೆಯ ಅವಧಿ ಮುಕ್ತಾಯದ ಹಂತದಲ್ಲಿದ್ದು ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್ ತಿಂಗಳಾರAಭದಿAದ ಮುಂಗಾರು ಮಳೆ ಅಡಿಯಿರಿಸುತ್ತದೆ. ಆದರೆ ಈ ಬಾರಿ ಪ್ರಸ್ತುತ ವಾಯುಭಾರ ಕುಸಿತದ ಪರಿಣಾಮವಾಗಿ ಕಳೆದ ಒಂದೆರಡು ದಿನಗಳಿಂದಲೇ ಜಿಲ್ಲೆಯಲ್ಲಿ ಮಳೆ ಸುರಿಯಲಾರಂಭಿಸಿದ್ದು, ಇನ್ನೂ ನಾಲ್ಕು ದಿನ ಮಳೆಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಇದೀಗ ಕಳೆದ ರಾತ್ರಿಯಿಂದ ಮಳೆಯ ತೀವ್ರತೆ ಕೂಡ ಒಂದಷ್ಟು ಹೆಚ್ಚಾಗಿದೆ.

ತಾ.೨೫ರ ತನಕವೂ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂಬದಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳೂ ತಿಳಿಸಿವೆ. ಇದೀಗ ಜಿಲ್ಲೆಯಲ್ಲಿ ಚಳಿಯ ವಾತಾವರಣದೊಂದಿಗೆ ದಿನವಿಡೀ ಮಳೆ ಸುರಿಯುತ್ತಿದ್ದು ಜನರು ಮುಂಗಾರು ಆರಂಭಕ್ಕೆ ಮುನ್ನವೇ ಕಿರಿಕಿರಿಯ ಸನ್ನಿವೇಶ ಎದುರಿಸುವಂತಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮೋಡ ಕವಿದ ವಾತಾವರಣವೇ ಕಂಡು ಬರುತ್ತಿದೆ. ಭಾರೀ ರಭಸದ ಮಳೆ ಎನಿಸದಿದ್ದರೂ ಇಡೀ ದಿನ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ನೈಜ ಮಳೆಗಾಲದ ಚಿತ್ರಣ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಈಗಿನ ಮಳೆಯ ವಾತಾವರಣದಿಂದಾಗಿ ಕೆಲವಾರು ಸಮಸ್ಯೆಗಳೂ ಎದುರಾಗುತ್ತಿವೆ. ಮಳೆಗಾಲದ ಪೂರ್ವ ತಯಾರಿಗೂ ಈಗಿನ ಮಳೆ ಅಡಚಣೆಯಾಗುತ್ತಿದೆ. ಮಾತ್ರವಲ್ಲದೆ ರಸ್ತೆ-ತೋಡು, ಚರಂಡಿ ವ್ಯವಸ್ಥೆ ಸಮರ್ಪಕವಾಗದಿರುವದರಿಂದ ಬಹುತೇಕ ಕಡೆಗಳಲ್ಲಿ ಕೆಸರು ಆವರಿಸಿ ಜನರು, ವಾಹನ ಸವಾರರು ಪರದಾಡುವಂತಾಗಿದೆ. ಇದು ಒಂದೆಡೆಯಾದರೆ ಕಾಫಿ ತೋಟಗಳಿಗೆ ಗೊಬ್ಬರ ಪೂರೈಸಲು ಈಗಿನ ವಾತಾವರಣ ಪ್ರಯೋಜನಕಾರಿಯಾದಂತಿದ್ದು ಬೆಳೆಗಾರರು ಈ ಕೆಲಸದತ್ತಲೂ ಮುಂದಾಗುತ್ತಿದ್ದಾರೆ. ರಸಗೊಬ್ಬರಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ.

ನಿನ್ನೆಯಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬುಧವಾರದಿಂದ ರಭಸ ಒಂದಷ್ಟು ಹೆಚ್ಚಾಗುವ ಸಾಧ್ಯತೆ ಕುರಿತು ಹವಮಾನ ಇಲಾಖೆ ಮಾಹಿತಿಗಳು ತಿಳಿಸಿವೆ. ತಾ.೨೫ರ ತನಕ ಜಿಲ್ಲೆಯಲ್ಲಿ ಅಂದಾಜು ೮.೨೦ ಇಂಚುಗಳಷ್ಟು ಮಳೆಯಾಗುವ ಸಾಧ್ಯತೆ ಕುರಿತು ಹೇಳಲಾಗಿದೆ.