ಮಡಿಕೇರಿ, ಮೇ ೨೦: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಡಳಿತಾವಧಿ ಮುಗಿದು ನಾಲ್ಕು ವರ್ಷ ಪೂರ್ಣಗೊಂಡಿದೆ. ಈ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯದೇ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತಾಗಿದೆ.

ಆಡಳಿತ ವಿಕೇಂದ್ರೀಕರಣ ಬಗ್ಗೆ ಪದೇ ಪದೇ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರಿಗೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯದೇ ನಾಲ್ಕು ವರ್ಷ ಕಳೆದಿದೆ ಎಂಬುದು ನೆನಪಿಲ್ಲ ಎಂದು ಕಾಣುತ್ತದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬAಧಿಸಿದAತೆ ಕ್ಷೇತ್ರವಾರು ಮೀಸಲು ಪಟ್ಟಿ ಏನೇ ಆಗಲಿ ಮೇ ಅಂತ್ಯದೊಳಗೆ ಚುನಾವಣಾ ಆಯೋಗಕ್ಕೆ ನೀಡುತ್ತೇವೆ ಎಂದು ೨೦೨೫ರ ಫೆಬ್ರವರಿ ೧೭ ರಂದು ಹೈಕೋರ್ಟ್ನಲ್ಲಿ ಸರ್ಕಾರದ ಜನರಲ್ ಅಡ್ವೊಕೇಟ್ ಶಶಿಕಿರಣ್ ಶೆಟ್ಟಿ ಮೌಖಿಕ ಮುಚ್ಚಳಿಕೆ ನೀಡಿದ್ದರು.

ಇದೀಗ ಮೇ ತಿಂಗಳು ಅರ್ಧಕ್ಕೆ ಬಂದು ನಿಂತಿದೆ. ಆದರೆ ಇದುವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಿಸಿಲ್ಲ.

ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಸಲು ಮೀಸಲಾತಿ ಪಟ್ಟಿಗಾಗಿ ಚುನಾವಣಾ ಆಯೋಗವು ಜಾತಕಪಕ್ಷಿಯಂತೆ ಕಾದುಕುಳಿತಿದೆ. ಹೈಕೋರ್ಟ್ಗೆ ಮಾಹಿತಿ ನೀಡಿದರು ಕೂಡ, ರಾಜ್ಯ ಸರ್ಕಾರದ ಈ ತಿಂಗಳು ಕೂಡ ಮೀಸಲಾತಿ ಪಟ್ಟಿ ಪ್ರಕಟಿಸುವ ಸಾಧ್ಯತೆ ತೀರಾ ವಿರಳ ಎನ್ನಲಾಗುತ್ತಿದೆ.

ಒಂದು ವೇಳೆ ಮೀಸಲು ಪಟ್ಟಿ ಪ್ರಕಟಿಸಿದರೂ ಕೂಡ ಚುನಾವಣಾ ಆಯೋಗಕ್ಕೆ ಚುನಾವಣಾ ಸಿದ್ಧತೆ ನಡೆಸಲು ಕನಿಷ್ಟ ಎರಡರಿಂದ ಮೂರು ತಿಂಗಳು ಅತ್ಯವಶ್ಯಕ.

ಸರ್ಕಾರ ನೀಡಿರುವ ಮೌಖಿಕ ಮುಚ್ಚಳಿಕೆ ಅನುಸಾರ ನಡೆದುಕೊಳ್ಳದೇ ಹೋದರೆ, ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರö್ಯ ಹೊಂದಿರುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಂಗನಿAದನೆ ಅರ್ಜಿ ವಿಲೇವಾರಿ ಮಾಡಿದ್ದರು.

೨೦೨೩ರಲ್ಲಿ ಕೊಟ್ಟ ಮಾತಿನಂತೆ ನಡೆಯದ ರಾಜ್ಯ ಸರ್ಕಾರ!

೨೦೨೩ರ ಡಿಸೆಂಬರ್ ೧೯ ರಂದು ಹೈಕೋರ್ಟ್ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಮೀಸಲಾತಿ ನಿಗದಿಪಡಿಸದ ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು.

ಈ ಸಂದರ್ಭ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ ೩೦ ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಸದಸ್ಯರ ಸಂಖ್ಯೆ, ವರ್ಗವಾರು ಮೀಸಲು ಸಂಖ್ಯೆ ಹಾಗೂ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಕೇವಲ ಒಂದು ವಾರದೊಳಗೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯ ಅಧಿಸೂಚನೆ ಹೊರಡಿಸಿ, ಇದಾದ ನಂತರ ೭ ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ, ೧೦ ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು, ತಿಂಗಳೊಳಗೆ ಮೀಸಲು ನಿಗದಿ ಪೂರ್ಣಗೊಳ್ಳಲಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ಗೆ ಮಾಹಿತಿ ನೀಡಿದ್ದರು.

ವಾದ ಆಲಿಸಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ, ಅರ್ಜಿ ಇತ್ಯರ್ಥ ಪಡಿಸಿದ್ದರು.

ಆದರೆ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಹೈಕೋರ್ಟ್ಗೆ ಮಾಹಿತಿ ನೀಡಿದ್ದರು.

೨೦೨೪ರ ಲೋಕಸಭಾ ಚುನಾವಣಾ ನೆಪವೊಡ್ಡಿ ಚುನಾವಣೆಯನ್ನು ನಡೆಸಲು ಆಸಕ್ತಿ ತೋರದ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸುವ ಗೋಜಿಗೇ ಹೋಗಲಿಲ್ಲ.

ಇದಾದ ಬಳಿಕ ಜೂನ್‌ನಲ್ಲಿ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತು. ಕೋರ್ಟ್ಗೆ ಕೊಟ್ಟ ಭರವಸೆಯಂತೆ ಸರ್ಕಾರ ನಡೆದಿಲ್ಲ ಎಂದು

(ಮೊದಲ ಪುಟದಿಂದ) ಚುನಾವಣಾ ಆಯೋಗವು ಹೈಕೋರ್ಟ್ನಲ್ಲಿ ವಾದ ಮಂಡಿಸಿತ್ತು. ಫೆಬ್ರವರಿ ೧೭ ರಂದು ರಾಜ್ಯ ಸರ್ಕಾರ ಮೇ ಅಂತ್ಯದೊಳಗೆ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಹೇಳಿ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಪಡಿಸಿದ್ದರು.

ಒಂದು ವೇಳೆ ರಾಜ್ಯ ಸರ್ಕಾರ ಮೇ ಅಂತ್ಯದೊಳಗೆ ಮೀಸಲು ಪಟ್ಟಿ ಚುನಾವಣಾ ಆಯೋಗಕ್ಕೆ ನೀಡದಿದ್ದರೆ ಮತ್ತೊಮ್ಮೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಕೋರ್ಟ್ನಲ್ಲಿ ಗುದ್ದಾಟ ನಡೆಯುವ ಸಾಧ್ಯತೆ ಇದೆ.

ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿ ಸಂಬAಧ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಲೇ ಇತ್ತು.

೨೦೨೦ರಲ್ಲಿ ರಾಜ್ಯ ಸರ್ಕಾರಕ್ಕೆ ರೂ. ೫ ಲಕ್ಷ ದಂಡ ವಿಧಿಸಿದ್ದ ಹೈಕೋರ್ಟ್!

‘ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ೧೨ ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು’ ಎಂದು ಸರ್ಕಾರ ೨೦೨೩ರ ಡಿಸೆಂಬರ್ ೧೯ ರಂದು ಹೈಕೋರ್ಟ್ಗೆ ಭರವಸೆ ನೀಡಿತ್ತು. ‘ಇದನ್ನು ಪಾಲನೆ ಮಾಡಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ಇದಕ್ಕೂ ಮೊದಲು ಹೈಕೋರ್ಟ್, ‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿದೆ’ ಎಂದು ರಾಜ್ಯ ಸರ್ಕಾರಕ್ಕೆ ೨೦೨೦ರ ಡಿಸೆಂಬರ್‌ನಲ್ಲಿ ರೂ. ೫ ಲಕ್ಷ ದಂಡ ವಿಧಿಸಿತ್ತು.

೨೦೨೧ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಇದಕ್ಕಾಗಿ ಪ್ರತ್ಯೇಕ ಸೀಮಾ ನಿರ್ಣಯ ಆಯೋಗ ರಚಿಸಲಾಗಿತ್ತು.

ಈ ಕ್ರಮವನ್ನು ಆಯೋಗವು ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಾವಧಿ ಮುಗಿದು ನಾಲ್ಕು ವರ್ಷ ಪೂರ್ಣಗೊಂಡಿದ್ದರೆ ಚುನಾವಣೆ ನಡೆದು ಒಂಭತ್ತು ವರ್ಷ ಕಳೆದಿದೆ.

ಶಾಸಕರಿಗೆ ನಿರಾಸಕ್ತಿ ಮೀಸಲು ಪ್ರಕಟಿಸಲು ಹಿಂದೇಟು ಹಾಕುತ್ತಿರುವ ಸರ್ಕಾರ!

ಜಿಲ್ಲಾ ಮತ್ತು ತಾಲೂಕು ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಆಡಳಿತ ಪಕ್ಷದ ಶಾಸಕರು ಕೂಡ ಸದ್ಯಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಬೇಡಿ ಎಂದು ಸರ್ಕಾರಕ್ಕೆ ಮತ್ತು ಸಚಿವರಿಗೆ ಒತ್ತಡ ಹಾಕುತ್ತಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದರೆ ಗ್ರಾಮೀಣ ಭಾಗದಲ್ಲಿ ಶಾಸಕರ ಆಡಳಿತ ಮತ್ತು ನಿಯಂತ್ರಣ ತಪ್ಪುತ್ತದೆ ಎಂಬ ಕಾರಣದಿಂದ ಚುನಾವಣೆಯ ಬಗ್ಗೆ ಯಾವ ಶಾಸಕರೂ ಕೂಡ ಆಸಕ್ತಿ ತೋರುತ್ತಿಲ್ಲ.

ಒಂದು ವೇಳೆ ರಾಜ್ಯ ಸರ್ಕಾರ ಇದೇ ತಿಂಗಳು ಅಂತ್ಯದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿದರು ಕೂಡ, ಮುಂದಿನ ಮೂರು ತಿಂಗಳಿಗೆ ಚುನಾವಣೆ ನಡೆಸುವುದು ಕಷ್ಟಸಾಧ್ಯ.

ಮೇ ತಿಂಗಳ ಅಂತ್ಯದೊಳಗೆ ಮೀಸಲು ಪಟ್ಟಿ ಚುನಾವಣಾ ಆಯೋಗಕ್ಕೆ ನೀಡಿದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚುನಾವಣಾ ಆಯೋಗ ಚುನಾವಣೆ ನಡೆಸಬಹುದು.

ಮೀಸಲು ಪಟ್ಟಿ ನೀಡಲು ಸರ್ಕಾರ ಮತ್ತಷ್ಟು ತಡಮಾಡಿದ್ದಲ್ಲಿ ಚುನಾವಣೆ ಕೂಡ ವಿಳಂಬವಾಗಲಿದೆ.

ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಡಳಿತಕ್ಕೆ ಯಾವಾಗ ಮುಹೂರ್ತ ಕೂಡಿ ಬರಲಿದೆ ಎಂದು ಕಾದುನೋಡಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ