ಮಡಿಕೇರಿ, ಮೇ ೮: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಇದೀಗ ಪಾಕಿಸ್ತಾನ, ಧರ್ಮದ ಮೇಲೆ ನಡೆದ ದಾಳಿ ಎಂದು ವಿಶ್ವದಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದು, ಕೇವಲ ಉಗ್ರರ ನೆಲೆಗಳ ಮೇಲೆ ಮಾತ್ರ ಭಾರತ ದಾಳಿ ನಡೆಸಿದೆ ಇಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ವಿಶ್ವವೇ ಭಾರತದ ಕ್ರಮವನ್ನು ಪ್ರಶಂಶಿಸಿದ್ದು ಭಾರತ ತನ್ನ ರಕ್ಷಣೆಯನ್ನು ಮಾಡುವ ಹಕ್ಕನ್ನು ಹೊಂದಿದೆ ಎಂದು ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿವೆ ಎಂದು ಅವರು ವಿವರಿಸಿದ್ದಾರೆ. ಪೆಹಲ್ಗಾವ್ನಲ್ಲಿ ಪಾಕಿಸ್ತಾನ ನಡೆಸಿದ ಹತ್ಯಾಕಾಂಡಕ್ಕೆ ಭಾರತ ಉತ್ತರವನ್ನು ನೀಡಿದೆ ವಿನಹ ಭಾರತವೇ ಮೊದಲು ಪಾಕಿಸ್ತಾನದ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಕೂಡ ಅವರು ಸ್ಪಷ್ಟಪಡಿಸಿದ್ದಾರೆ. ಪೆಹಲ್ಗಾಮ್ನಲ್ಲಿ ನಡೆದ ಹತ್ಯಾಕಾಂಡದಲ್ಲಿ ತನ್ನ ಪಾತ್ರ ಇಲ್ಲ ಎಂದು ಪಾಕಿಸ್ತಾನ ವಾದಿಸಿದ್ದು ಎರಡು ರಾಷ್ಟçಗಳು ಜಂಟಿಯಾಗಿ ತನಿಖೆ ನಡೆಸಬೇಕೆಂಬ ಆ ಸರಕಾರದ ಹೇಳಿಕೆಯನ್ನು ಅವರು ಅಲ್ಲಗಳಿದಿದ್ದಾರೆ.ಈ ಹಿಂದೆ ನಡೆದ ಹತ್ಯಾಕಾಂಡಗಳಲ್ಲಿ ಪಾಕಿಸ್ತಾನಕ್ಕೆ ಸಾಕ್ಷಾಧಾರಗಳನ್ನು ನೀಡಿದರೂ ಕೂಡ ಯಾವುದೇ ತನಿಖೆ ಮಾಡದೆ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸದೆ ಇರುವುದರಿಂದ ಪೆಹಲ್ಗಾಮ್ ಘಟನೆಯ ಕುರಿತು ಜಂಟಿ ತನಿಖೆಗೆ ಭಾರತ ಸಿದ್ಧವಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.
ಧರ್ಮದ ಆಧಾರದಲ್ಲಿ ಭಾರತ ದಾಳಿ ನಡೆಸಿತು ಎಂದು ಸುಳ್ಳು ಆರೋಪ ಹೊರಿಸಿರುವ ಪಾಕಿಸ್ತಾನ ಇದೀಗ ಕಾಶ್ಮೀರದ ಗುರುದ್ವಾರದ ಮೇಲೆ ದಾಳಿ ನಡೆಸಿದ್ದು, ಅದು ಧರ್ಮದ ಮೇಲೆ ದಾಳಿ ನಡೆಸಿದ್ದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.