ಮಡಿಕೇರಿ, ಮೇ ೮: ಗುರುವಾರ ಸೂರ್ಯಾಸ್ತಮ ಆದ ಬಳಿಕ ಪಾಕಿಸ್ತಾನ ಭಾರತದ ಹಲವು ದೇಶಗಳ ಮೇಲೆ ವಾಯು ದಾಳಿಗೆ ವಿಫಲ ಯತ್ನ ನಡೆಸಿತು. ಪೂರ್ವ ತಯಾರಿ ನಡೆಸಿದ್ದ ಭಾರತ, ಪಾಕಿಸ್ತಾನದ ಎಲ್ಲಾ ಪ್ರಯತ್ನಕ್ಕೂ ಹಿನ್ನೆಡೆಯಾಗುವಂತೆ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿತು. ಕಾಶ್ಮೀರ ಜಮ್ಮು ಅಮೃತ್‌ಸರ್ ಹಾಗೂ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಕೆಲವೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಶ್ರೀನಗರದ ಏರ್ಪೋರ್ಟ್ ಸೇರಿದಂತೆ ದೇಶದ ರಕ್ಷಣಾ ವ್ಯವಸ್ಥೆ ಇರುವ ಹಲವು ರಾಜ್ಯಗಳಲ್ಲಿ ವಾಯುದಾಳಿಗೆ ಪಾಕಿಸ್ತಾನ ಪ್ರಯತ್ನ ನಡೆಸಿದ್ದು ಭಾರತದ ಪ್ರತಿ ದಾಳಿಗೆ ಪಾಕಿಸ್ತಾನ ತತ್ತರಿಸಿತು. ಪಾಕಿಸ್ತಾನದ ಫೈಟರ್ ಜೆಟ್‌ಗಳನ್ನು ಭಾರತ ಸೇನೆ ಹೊಡೆದು ಉರುಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತದ ಪ್ರಮುಖ ಏರ್ಪೋರ್ಟ್ಗಳನ್ನು ಮುಚ್ಚಲಾಗಿದೆ. ಭಾರತದ ಗಡಿಯಲ್ಲಿ ಬಿಗು ವಾತಾವರಣವಿದ್ದು ಕೇಂದ್ರದ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಜಯಶಂಕರ್ ಇವರುಗಳು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ರಾತ್ರಿಯ ಸೈರನ್ ಮೊಳಗುತ್ತಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಮಾಧ್ಯಮಗಳ ವರದಿ ಯಂತೆ ರಾತ್ರಿ ಭಾರತದ ಸೇನೆ ಪಾಕಿಸ್ತಾನದ ಹಲವು ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಸೇನಾ ಬಲವನ್ನು ಕುಂಠಿತಗೊಳಿಸುವAತೆ ಮಾಡಿದೆ. ಭಾರತದತ್ತ ಬರುತ್ತಿದ್ದ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಪಾಕಿಸ್ತಾನದ ಪೈಲೆಟ್ ಒಬ್ಬನನ್ನು ಬಂಧಿಸಿರುವುದಾಗಿ ತಡರಾತ್ರಿ ಮಾಹಿತಿ ಲಭ್ಯವಾಗಿದ್ದು ಇದನ್ನು ಸೇನೆ ಖಚಿತಪಡಿಸಿಲ್ಲ. ರಾತ್ರಿ ೧೧ ಗಂಟೆಯ ವೇಳೆಗೆ ದೇಶದ ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದ ಮಾಹಿತಿ ಯಲ್ಲಿ ದೇಶದಲ್ಲಿ ಪಾಕಿಸ್ತಾನ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಹಾಗೂ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ.