ಮಡಿಕೇರಿ, ಮೇ ೮: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಜಲ ಜೀವನ ಮಿಷನ್ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ವಿಳಂಬವಾಗುತ್ತಾ ವಿಫಲತೆ ಸಾಧಿಸುತ್ತಿರುವ ಬಗ್ಗೆ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷತೆ ವಹಿಸಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಜೆಜೆಎಂ ಯೋಜನೆಯ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಅಧಿಕಾರಿಗಳು ಸರಿಯಾದ ಉತ್ತರ ನೀಡದ ಕುರಿತು ಅತೃಪ್ತಿ ವ್ಯಕ್ತಪಡಿಸಿ, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.

ಸಮಿತಿ ಸದಸ್ಯ ಡಾ. ಬಿ.ಸಿ. ನವೀನ್ ಕುಮಾರ್, ನಾಗೇಶ್ ಕುಂದಲ್ಪಾಡಿ, ಚೆಪ್ಪುಡಿರ ರಾಕೇಶ್ ದೇವಯ್ಯ ಜೆಜೆಎಂ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.

ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರ ಭಾಸ್ಕರ್, ಹಂತ ೧ ರಲ್ಲಿ ಒಟ್ಟು ೧೮೮ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ೧೮೫ ಕಾಮಗಾರಿ ಪೂರ್ಣವಾಗಿದೆ. ಹಂತ ೨ ರಲ್ಲಿ ೧೨೯ ಪೈಕಿ ೮೫, ಹಂತ ೩ ರಲ್ಲಿ ೪೫೭ ಕಾಮಗಾರಿ ಪೈಕಿ ೩೪೮ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ೪೫೭ ಕಾಮಗಾರಿಗಳಿದ್ದು, ೧೦೭ ಪ್ರಗತಿಯಲ್ಲಿವೆ ಎಂದು ಮಾಹಿತಿ ಒದಗಿಸಿದರು.

ಸಮಿತಿ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಹಲವೆಡೆ ಕಳಪೆ ಕಾಮಗಾರಿ ನಡೆಯುತ್ತಿದ್ದು, ನಿಟ್ಟೂರು ಭಾಗದಲ್ಲಿ ಟ್ಯಾಂಕ್‌ಗೆ ಹಾನಿಯಾಗಿದೆ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಯೋಜನೆ ಸಂಪೂರ್ಣ ವಿಫಲತೆ ಕಂಡಿದೆ ಎಂದು ದೂರಿದರು.

ಮತ್ತೋರ್ವ ಸದಸ್ಯ ಆರ್.ಕೆ. ಚಂದ್ರು ಮಾತನಾಡಿ, ಅಸಮರ್ಪಕ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಂಡು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ, ಜೆಜೆಎಂನಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿದ್ದು, ಕೆಳ ದರ್ಜೆಯ ಪರಿಕರ, ಉಪಕರಣಗಳನ್ನು ಅಳವಡಿಸುತ್ತಿರುವ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ನಿಟ್ಟೂರು ಟ್ಯಾಂಕ್ ಹಾನಿಯೇ ಸಾಕ್ಷಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಈ ಯೋಜನೆಯಲ್ಲಿ ಲೋಪಗಳು ಕಂಡುಬರುತ್ತಿದ್ದು, ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ ಅವರು, ಪೆರಾಜೆ ಭಾಗದಲ್ಲಿ ಯೋಜನೆ ಹಳ್ಳ ಹಿಡಿದಿದೆ. ಎಲ್ಲಿಯೂ ಯೋಜನೆಯಡಿ ನೀರು ಪೂರೈಕೆಯಾಗುತ್ತಿಲ್ಲ ಎಂದರು.

ಸಂಬAಧಪಟ್ಟ ಅಧಿಕಾರಿ ಜುಲೈ ಅಂತ್ಯದೊಳಗೆ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಚರ್ಚೆ

ಗ್ರಾಮೀಣ ಭಾಗದಲ್ಲಿ ತಲೆದೋರಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಿತಿ ಸದಸ್ಯರೊಡನೆ ತೀವ್ರ ಚರ್ಚೆಯಾಯಿತು.

೩೭ ಕಡೆಗಳಲ್ಲಿ ಟವರ್‌ಗಳಿದ್ದು, ೪ ಕಡೆಗಳಲ್ಲಿ ನಿರ್ಮಾಣ ಪ್ರಗತಿಯಲ್ಲಿದೆ. ೧೦ ಕಡೆಗಳಲ್ಲಿ ಅರಣ್ಯ ಇಲಾಖೆಯ ಅನುಮತಿಗಾಗಿ ಹಾಗೂ ೩ ಕಡೆಗಳಲ್ಲಿ ಯುಎಸ್‌ಒಎಫ್ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು.

ಯದುವೀರ್ ಒಡೆಯರ್ ಅವರು, ಅಧಿಕಾರಿಗಳು ಪ್ರತಿ ಬಾರಿ ಒಂದೇ ಉತ್ತರ ನೀಡುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಟವರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮಾಡುತ್ತಿರುವ ಸಮಸ್ಯೆಯ ಬಗ್ಗೆ ಯದುವೀರ್ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಅಧಿಕಾರಿ, ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಉನ್ನತಾಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಟವರ್ ಇರುವ ಜಾಗದಲ್ಲಿ ಬ್ಯಾಟರಿ ಸಮರ್ಪಕವಾಗಿರುವುದಿಲ್ಲ. ಡೀಸೆಲ್ ಸರಿಯಾಗಿ ಪೂರೈಸುವುದಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಕ್ರಮದ ಅಗತ್ಯತೆ ಇದೆ ಎಂದು ಹೇಳಿದರು.

ನಾಗೇಶ್ ಕುಂದಲ್ಪಾಡಿ ಮಾತನಾಡಿ, ಟವರ್ ಕಾರ್ಯನಿರ್ವಹಣೆಗೆ ಬೇಕಾದ ಡೀಸೆಲ್ ಅನ್ನು ಒದಗಿಸುವಂತೆ ಸ್ಥಳೀಯ ಗ್ರಾ.ಪಂ.ಗಳಿಗೆ ಸೂಚಿಸಲಾಗುತ್ತಿದ್ದು, ಇದಕ್ಕೆ ಪರ್ಯಾಯ ಅನುದಾನ ಇರುವುದಿಲ್ಲ. ಬಿಎಸ್‌ಎನ್‌ಎಲ್ ಸಂಸ್ಥೆ ಇದನ್ನು ನಿರ್ವಹಿಸಬೇಕು. ಅದಲ್ಲದೆ ಪೂರೈಕೆಯಾಗುತ್ತಿರುವ ಡೀಸೆಲ್ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಬಿಎಸ್‌ಎನ್‌ಎಲ್ ಅಧಿಕಾರಿಗೆ ಕನ್ನಡ ಕಲಿಯುವಂತೆ ಯದುವೀರ್ ಸಲಹೆ ನೀಡಿದರು.

ತಡೆಗೋಡೆ ಶೀಘ್ರದಲ್ಲಿ ಪೂರ್ಣ

ಮಡಿಕೇರಿ ಜಿಲ್ಲಾಡಳಿತ ಭವನ ಎದುರಿನ ತಡೆಗೋಡೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಮುಂಗಾರು ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣಾ ಕೆಲಸಗಳು ನಡೆಯುತ್ತಿದ್ದು, ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ರಸ್ತೆ ಬದಿಯ ಚರಂಡಿಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಜಂಗಲ್ ಕಟ್ಟಿಂಗ್‌ಗೆ ಕ್ರಮವಹಿಸಬೇಕೆಂದು ಸೂಚಿಸಿದರು.

ಸಮಿತಿ ಸದಸ್ಯ ಆರ್.ಕೆ. ಚಂದ್ರು ಮಡಿಕೇರಿ-ಸಿದ್ದಾಪುರ ರಸ್ತೆ ಹದಗೆಟ್ಟಿರುವ ಬಗ್ಗೆ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದರು.

ಅಗತ್ಯ ಗೊಬ್ಬರ ದಾಸ್ತಾನು

ಜಿಲ್ಲೆಗೆ ಅಗತ್ಯವಾದ ರಸಗೊಬ್ಬರಗಳನ್ನು ದಸ್ತಾನಿಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದರು. ೮೮ ಸಾವಿರ ಮೆಟ್ರಿಕ್ ಟನ್ ಅವಶ್ಯಕತೆಯಿದ್ದು, ೪೦ ಸಾವಿರ ಮೆ.ಟ. ದಸ್ತಾನಿಡಲಾಗಿದೆ. ಜಿಲ್ಲೆಗೆ ಕಾಂಪ್ಲೆಕ್, ಯೂರಿಯ, ಡಿಎಪಿ ಬೇಕಾಗಿದ್ದು, ಅವುಗಳನ್ನು ಸಂಗ್ರಹಿಸಲಾಗಿದೆ. ಯೂರಿಯ ಅಕ್ರಮ ಸಾಗಟವಾಗದಂತೆ ನಿಗಾವಹಿಸಲಾಗಿದೆ ಎಂದು ವಿವರಿಸಿದರು.

ಎನ್‌ಎಫ್‌ಎಸ್‌ಎಂ ಕಾರ್ಯಕ್ರಮದಡಿ ಉಚಿತವಾಗಿ ಭತ್ತದ ಬಿತ್ತನೆ ಬೀಜ ನೀಡಲು ಪ್ರಸ್ತಾವನೆ ಕಳಹಿಸಲಾಗಿದೆ. ೧,೭೦೦ ಕ್ವಿಂಟಾಲ್ ಬೀಜವನ್ನು ಕೃಷಿ ಇಲಾಖೆಯಿಂದ ಬೆಳೆಸಲಾಗಿದೆ. ವಿತರಣೆಗೂ ಕ್ರಮವಹಿಸಲಾಗುವುದು ಎಂದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಪಡೆಯಲು ರೈತರು ಹಿಂದೇಟು ಹಾಕುತ್ತಿದ್ದು, ಈ ಕುರಿತು ವ್ಯಾಪಕ ಪ್ರಚಾರ ಹಾಗೂ ಜಾಗೃತಿಯ ಅವಶ್ಯಕತೆಯಿದೆ ಎಂದು ಸಮಿತಿ ಸದಸ್ಯ ಡಾ. ನವೀನ್ ಸಭೆಯಲ್ಲಿ ಪ್ರಸ್ತಾಪಿಸಿ, ಶೇ. ೧೦ರಷ್ಟು ರೈತರು ಮಾತ್ರ ವಿಮೆ ಮಾಡಿಸಿಕೊಂಡಿದ್ದು, ಇದರ ಉಪಯೋಗವನ್ನು ಪ್ರಚುರಪಡಿಸಬೇಕು ಎಂದರು.

೩೩೨ ರೈತರು ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದು, ಗ್ರಾಮೀಣ ಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಿಮೆ ಯೋಜನೆಯಲ್ಲಿರುವ ಕೆಲವೊಂದು ಮಾರ್ಗಸೂಚಿಯಿಂದ ರೈತರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.

ಆತ್ಮ ಸೇರಿದಂತೆ ಇನ್ನಿತರ ಯೋಜನೆಗಳ ಕುರಿತು ಅಧಿಕಾರಿಗಳಿಂದ ಡಾ. ನವೀನ್ ಕುಮಾರ್ ಮಾಹಿತಿ ಪಡೆದು ಅನುಷ್ಠಾನಗಳ ಕುರಿತು ಸಲಹೆಗಳನ್ನು ನೀಡಿದರು.

ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ

ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಕುರಿತು ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದರು.

ಪಿಎಂಜಿಎಸ್‌ವೈ ಅಡಿ ಬುಡಕಟ್ಟು ಜನಾಂಗ ವಾಸಿಸುವ ಹಾಡಿಗಳಲ್ಲಿ ರಸ್ತೆ ಸೌಕರ್ಯ ಒದಗಿಸಲು ಮುಂದಾಗಿದ್ದು, ಹಲವೆಡೆ ಅರಣ್ಯ ಇಲಾಖೆ ತಕರಾರು ಎತ್ತಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ದೂರಿದರು.

ಕುಟ್ಟ, ಕೆ. ಬಾಡಗ, ನಿಟ್ಟೂರು, ಹುದಿಕೇರಿ, ತಿತಿಮತಿ ಸೇರಿದಂತೆ ಚಾಲ್ತಿಯಲ್ಲಿರುವ ೮ ರಸ್ತೆ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಪಿಎಂಜಿಎಸ್‌ವೈ ಅಧಿಕಾರಿ ತಿಳಿಸಿದರು.

ಸಾಗುವಳಿ ನಡೆಸುತ್ತಿರುವ ಆದಿವಾಸಿ ರೈತರಿಗೆ ಹಕ್ಕುಪತ್ರ ವಿತರಿಸುವಂತೆ ಸಮಿತಿ ಸದಸ್ಯರು ಒತ್ತಾಯಿಸಿದರು.

ಐಟಿಡಿಪಿ ಅಧಿಕಾರಿ ಪ್ರತಿಕ್ರಿಯಿಸಿ, ಹಕ್ಕುಪತ್ರ ನೀಡುವ ಪ್ರಕ್ರಿಯೆಗಳು ನಡೆಯುತ್ತ್ತಿವೆ. ೪,೨೮೭ ಅರ್ಜಿಗಳು ಬಂದಿದ್ದು, ಹಂತಹAತವಾಗಿ ವಿತರಿಸಲಾಗುತ್ತಿದೆ. ಈಗಾಗಲೇ ೨೮ ಸಾವಿರ ಹೆಕ್ಟೇರ್ ಪ್ರದೇಶದ ಹಕ್ಕುಪತ್ರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನೀಡಿದ ಹಕ್ಕುಪತ್ರದ ಆರ್‌ಟಿಸಿಗಳಲ್ಲಿ ಸಾಗುವಳಿದಾರರ ಹೆಸರು ಇಲ್ಲದ ಬಗ್ಗೆ ಆಕ್ಷೇಪಿಸಿದ ಸದಸ್ಯ ಚಂದ್ರು ಅವÀರಿಗೆ ಉತ್ತರಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಆರ್‌ಟಿಸಿಯಲ್ಲಿ ಸರಕಾರ ಎಂಬ ಉಲ್ಲೇಖವಿರುತ್ತದೆ. ಆದರೆ, ಸಾಗುವಳಿ ನಡೆಸಲು ಯಾವುದೆ ತೊಂದರೆ ಇಲ್ಲ. ಸರಕಾರದ ಸೌಲಭ್ಯ ಒದಗಿಸಲು ಅವಕಾಶಗಳಿವೆ ಎಂದರು.

ಕಾಡಾನೆ ಸೇರಿದಂತೆ ವನ್ಯಜೀವಿ ಉಪಟಳ ತಡೆಗೆ ಕ್ರಮವಹಿಸಲು ಕೇಂದ್ರದ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಇದೇ ಸಂದರ್ಭ ಹೇಳಿದರು.

ಸಭೆಯ ಆರಂಭದಲ್ಲಿ ‘ಆಪರೇಷನ್ ಸಿಂಧೂರ್’ ಯಶಸ್ವಿಗೆ ಅಭಿನಂದಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಡಾ. ಬಿ.ಸಿ. ನವೀನ್ ಕುಮಾರ್, ಆರ್.ಕೆ. ಚಂದ್ರು, ನಾಗೇಶ್ ಕುಂದಲ್ಪಾಡಿ, ಕಾಂತಿ ಸತೀಶ್, ಅಪ್ಪನೆರವಂಡ ರಾಜೇಶ್, ಪ್ರವೀಣ್ ಕುಮಾರ್, ಕೆ.ಎ. ಕಾವೇರಮ್ಮ, ಚೆಪ್ಪುಡಿರ ರಾಕೇಶ್ ದೇವಯ್ಯ, ಅರುಣಾ ಕುಮಾರಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.