ಮಡಿಕೇರಿ, ಮೇ ೭: ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಅಂತಃಸ್ವರೂಪ ಇನ್ನೊಂದರಲ್ಲಿ ವ್ಯಕ್ತವಾಗುವುದರಿಂದ ಒಂದು ಇನ್ನೊಂದಕ್ಕೆ ಪೂರಕವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ನಗರದ ರೆಡ್‌ಬ್ರಿಕ್ಸ್ನ ಸತ್ಕಾರ ಸಭಾಂಗಣದಲ್ಲಿ ನಡೆದ ಸಮರ್ಥ ಕನ್ನಡಿಗರು ಕೊಡಗು ಮತ್ತು ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಕನ್ನಡ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ನಾನಾ ದೇಶಗಳಲ್ಲಿ ಭಾರತ ಇಂದು ವಿಜೃಂಭಿಸಲು ಪ್ರಮುಖ ಕಾರಣವೇ ನಮ್ಮ ಸಂಸ್ಕೃತಿ ಯಾಗಿದೆ. ಲಿಪಿಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಿ ಗೊಳಿಸುವ ಕಲೆಯನ್ನು ಮನುಷ್ಯ ರೂಢಿಸಿ ಕೊಂಡದ್ದು ಸಂಸ್ಕೃತಿಯ ವಿಕಾಸದಲ್ಲಿ ಬಹು ದೊಡ್ಡ ಹೆಜ್ಜೆಯಾಗಿದೆ. ನಮ್ಮ ಭಾಷೆ ಸಂಸ್ಕೃತಿ ಬೆಳೆಯಲು ಇಂತಹ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯಬೇಕು ಎಂದೂ ಅವರು ಹೇಳಿದರು.

ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಕೊಡಗು ಮತ್ತು ಮುಂಬಯಿ ನಡುವಿನ ಬಾಂಧವ್ಯ ಬಹಳ ಹಳೆಯದು. ಅದಕ್ಕೆ ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲೆ ಆಧಾರ ಇದೆ. ಈ ಕಾರ್ಯಕ್ರಮ ಬಾಂಧವ್ಯದ ಬೆಸುಗೆಗೊಂದು ಸಂಕೇತವಾಗಿದೆ ಎಂದರಲ್ಲದೇ, ದೇಶಸೇವೆ, ಸೈನಿಕ ಸೇವೆಯ ಜೊತೆಗೆ ಸಾಹಿತ್ಯ ರಂಗದಲ್ಲೂ ಕೊಡಗು ಉತ್ತಮ ಸಾಧನೆ ತೋರುತ್ತಿದೆ ಎಂದು ಶ್ಲಾಘಿಸಿದರು. ಹಿರಿಯ ಲೇಖಕ ಕಿಗ್ಗಾಲು ಗಿರೀಶ್ ಅವರ ಕೆಲವು ರಚನೆಗಳನ್ನು ಸುಬ್ರಾಯ ಸಂಪಾಜೆ ಗಮಕ ರೂಪದಲ್ಲಿ ಹಾಡಿದರು.

ಕಾರ್ಯಕ್ರಮದಲ್ಲಿ ಆಶಯ ನುಡಿ ಗಳನ್ನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ, ಕನ್ನಡಿಗರು ದೇಶದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಭಾಷೆಗೆ ಅವರೆಲ್ಲರ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ಭಾಷೆ ಎಂಬುದು ಭಾವನೆಗಳನ್ನು ಬೆಸೆಯುವ ಕೊಂಡಿಯAತಿದೆ ಎಂದರಲ್ಲದೆ, ಮುಂಬೈನ ಕನ್ನಡ ಪರ ಸಂಸ್ಥೆ ಯೊಂದು ದೂರದ ಮಡಿಕೇರಿಯಲ್ಲಿ ಕನ್ನಡ ಹಬ್ಬಕ್ಕೆ ಸಹಯೋಗ ನೀಡಿರುವುದೇ ಈ ಬೆಸುಗೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಮೂಲತ ಮಡಿಕೇರಿಯವರಾದ ಶ್ರೀದೇವಿ ಸಿ. ರಾವ್ ಅವರು ತನ್ನ ದಿ. ಪತಿ ಚಂದ್ರಶೇಖರ ರಾವ್ ಹೆಸರಲ್ಲಿ ಟ್ರಸ್ಟ್ ಪ್ರಾರಂಭಿಸಿ ಆ ಮೂಲಕ ಮುಂಬೈನಲ್ಲಿ ಸಾಹಿತ್ಯಾಸಕ್ತ ರೊಂದಿಗೆ ನಾನಾ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿ ರುವುದು ಕೊಡಗಿಗೇ ಹೆಮ್ಮೆಯಾಗಿದೆ ಎಂದೂ ಅನಿಲ್ ಹೇಳಿದರು. ಮುಂಬೈಯ ಸಾಹಿತಿ ಗೋಪಾಲ ತ್ರಾಸಿ, ಮುಂಬೈನ ದಿ. ಚಂದ್ರಶೇಖರ ರಾವ್, ಮೆಮೋರಿಯಲ್ ಟ್ರಸ್ಟ್ನ ಮುಖ್ಯಸ್ಥೆ ಶ್ರೀದೇವಿ ಸಿ. ರಾವ್, ಮುಂಬೈಯ ಲೇಖಕಿ ಡಾ. ಕುಸುಮ, ಮಂಡ್ಯದ ಲೇಖಕಿ ಶ್ವೇತಾ ಮಾತನಾಡಿದರು. ಟ್ರಸ್ಟ್ನ ಉಪಾಧ್ಯಕ್ಷ ಪ್ರತಾಪ್ ಉಪಸ್ಥಿತರಿದ್ದರು. ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕಿ ಜಯಲಕ್ಷಿö್ಮ ಸ್ವಾಗತಿಸಿದರು.

ಸನ್ಮಾನದ ಗೌರವ

ಈ ಸಂದರ್ಭ ಕನ್ನಡ ಸೇವೆ ಹಾಗೂ ನಿರೂಪಣಾ ಕೌಶಲ್ಯಕ್ಕಾಗಿ ಮಡಿಕೇರಿಯ ಮುನೀರ್ ಅಹಮ್ಮದ್ ಅವರಿಗೆ ಸಮರ್ಥ ಕನ್ನಡಿಗರು ಸಂಸ್ಥೆ ‘ವಾಗ್ಭೂಷಣ’ ಪುರಸ್ಕಾರ ನೀಡಿ ಗೌರವಿಸಿತು. ಸಮಾಜ ಸೇವೆಗಾಗಿ ಪುಷ್ಪಾ ಕೃಷ್ಣಾನಂದ ಶೇಟ್ ಅವರಿಗೆ ‘ಸಮಾಜ ಸೇವಾ ರತ್ನ’, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಗೋಪಾಲ ತ್ರಾಸಿಯವರಿಗೆ ‘ಕನ್ನಡ ಕಲಾ ರತ್ನ’, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಶ್ರೀದೇವಿ ಸಿ. ರಾವ್ ಅವರಿಗೆ ಸಮಾಜ ಸೇವಾ ರತ್ನ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ಕುಸುಮಾ ಅವರಿಗೆ ‘ಕನ್ನಡ ರತ್ನ’ ಎಂದು ಗೌರವಿಸಲಾಯಿತು. ಚಿತ್ರಕಲೆಯಲ್ಲಿ ರಾಜ್ಯಮಟ್ಟದ ಸಾಧನೆಗೈದ ಶಿಕ್ಷಣ, ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಬೆಳೆಸಿಕೊಂಡ ಬಹುಮುಖ ಪ್ರತಿಭೆ ಸಾತ್ವಿಕ್ ಅಣ್ವೇಕರ್ ನನ್ನು "ಉದಯ ರವಿ" ಎಂದು ಗೌರವಿಸಿ ಪುರಸ್ಕಾರ ನೀಡಲಾಯಿತು. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರಾದ ಚಿತ್ರಾ ಆರ್ಯನ್, ಅರ್ಪಿತಾ ಸಂದೀಪ್ ಮತ್ತು ಶಾಂತಿ ಅಚ್ಚಯ್ಯ ಪ್ರಾರ್ಥಿಸಿದರು. ಸವಿತಾ ರಾಕೇಶ್ ವಂದಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಕಡ್ಲೇರ ತುಳಸಿ ಮೋಹನ್ ನೆರವೇರಿಸಿದರು. ಸಾಂಸ್ಕೃತಿಕ ವೇದಿಕೆಯಲ್ಲಿ ಮೂರ್ನಾಡಿನ ಸೌಮ್ಯ ಭಟ್ ಮಾರ್ಗದರ್ಶನದಲ್ಲಿ ಶಿವ ತಾಂಡವ ನೃತ್ಯ ಪ್ರದರ್ಶಿತವಾಯಿತು. ಜನನಿ ಮತ್ತು ತಂಡದ ಆಕರ್ಷಕ ಕೋಲಾಟ ಪ್ರದರ್ಶನ ಜನಮನ ಮನಸೂರೆ ಗೊಂಡಿತು. ಶ್ರೀರಕ್ಷಾ ಪ್ರಭಾಕರ್ ಗಾಯನ ಪ್ರೇಕ್ಷಕರನ್ನು ಮನ ರಂಜಿಸಿತು. ಅವನಿಕಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಗೋಪಾಲ ತ್ರಾಸಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಲೇಖಕಿ ಸ್ಮಿತಾ ಅಮೃತರಾಜ್ ಕಾವ್ಯ ರಚನೆಯ ಬಗ್ಗೆ ಮಾತನಾಡಿ ಕವಿತೆ ವಾಚಿಸಿದರು. ಹತ್ತು ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯನ್ನು ಕೃಪಾ ದೇವರಾಜ್ ನಿರ್ವಹಿಸಿದರು.