ವೈಶಾಖ ಮಾಸದಲ್ಲಿ ಬರುವ ಅತಿ ಮುಖ್ಯವಾದ ವ್ರತ, ಪರ್ವಗಳಲ್ಲಿ ಅಕ್ಷಯ ತೃತೀಯ ಮುಖ್ಯವಾದದ್ದು. ಗಂಗಾ ಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ, ದೀಪ, ಹೂವು ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತೀ ಪ್ರಶಸ್ತ ದಿನವೆಂದು ಭಾವಿಸಲಾಗಿದೆ.

‘ಬೆನ್ನು ಗೂನಾಗಿ ಕೋಲೂರಿ ನಡೆಯುತ್ತಾ, ಕೆಮ್ಮುತ್ತಿರುವ ಸ್ಥಿತಿಯು ಬರುವುದಕ್ಕೆ ಮೊದಲೇ ಬದರೀ ತೀರ್ಥಯಾತ್ರೆ ಮಾಡು, ಅದು ಮುಕ್ತಿದ್ವಾರ’ ಎಂದು ಭಕ್ತ ಶ್ರೇಷ್ಠರಾದ ತಿರುಮಂಗೈ ಆಳ್ವಾರ್ ಅವರು ಘೋಷಿಸುತ್ತಾರೆ. ಇಂತಹ ಪವಿತ್ರವಾದ ಬದರೀ ನಾರಾಯಣ ಮಂದಿರವನ್ನು (ದ್ವಾರವನ್ನು) ತೆರೆಯುವುದು ಅಕ್ಷಯ ತೃತೀಯದಂದು. ಅದು ಮುಕ್ತ ದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು.

ಭಗವಂತನ ದಶಾವತಾರಗಳಲ್ಲಿ ಆರನೆಯದಾಗಿ ‘ಬ್ರಹ್ಮ-ಕ್ಷ್ತ ಅವತಾರ’ ಎನ್ನಿಸಿರುವ ಪರಶುರಾಮ ದೇವರ ಜಯಂತಿಯೂ ಈ ದಿನದಲ್ಲಿ ಕೂಡಿ ಬರುತ್ತದೆ. ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನ್ನಿಸಿರುವ ತಿಥಿ ಅಕ್ಷಯ ತೃತೀಯ ಪರ್ವ.

ಎಲ್ಲ ಯುಗಗಳಿಗೂ ಆದ್ಯವಾಗಿರುವ ಸತ್ಯ ಯುಗಕ್ಕೆ ಆದಿ ದಿನವಾದ ‘ಕೃತ ಯುಗಾದಿ’ ಎಂದೂ ಇದು ಪರಿಗಣಿತವಾಗಿದೆ. ಕ್ಷೇತ್ರಗಳಲ್ಲಿ ಬೀಜವನ್ನು ಬಿತ್ತುವುದಕ್ಕೂ, ಇದನ್ನು ಪ್ರಶಸ್ತ ದಿನವನ್ನಾಗಿ ಲೆಕ್ಕಿಸುತ್ತಾರೆ.

ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು, ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ (ಅಕ್ಷಯ ಫಲ ತೃತೀಯ) ಎಂದೂ ಕರೆಯಲಾಗಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಆ ಹೆಸರು ಬಂದಿದೆ. ಕನ್ನಡ ಭಾಷೆಯಲ್ಲಿರುವ ‘ಅಕ್ಷಯ ತದಿಗೆ’ ಎಂಬುದು ಈ ಅಕ್ಷಯ ತೃತೀಯೆಯ ದೇಶಿಯ ರೂಪ.

ಈ ದಿವಸದಲ್ಲಿ ಸೋಮವಾರ ಅಥವಾ ಬುಧವಾರ ಮತ್ತು ರೋಹಿಣೀ ನಕ್ಷತ್ರಗಳು ಕೂಡಿ ಬಂದರೆ ಅದು ಅಕ್ಷಯವಾದ ಸುಕೃತದ ಫಲವಾದ ಯೋಗವೆಂದು ಯೋಗಿಗಳು ಹೇಳುತ್ತಾರೆ. ಏಕೆಂದರೆ ಆ ವಾರ ಮತ್ತು ನಕ್ಷತ್ರಗಳು ಶ್ರೀ ಕೃಷ್ಣನ ಪೂಜೆಗೆ ಅತ್ಯಂತ ಪ್ರಶಸ್ತವಾದವು.

ಈ ದಿನ ಬೆಳಿಗ್ಗೆ ಸಂಕಲ್ಪ ಸಹಿತ ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಸಾಕ್ಷಾತ್ ಗಂಗಾ ನದಿಯಲ್ಲಿ ಸ್ನಾನ ಮಾಡುವ ಅವಕಾಶವಿಲ್ಲದವರು ತಾವು ಸ್ನಾನ ಮಾಡುವ ನೀರಿನಲ್ಲಿಯೇ ಗಂಗೆಯನ್ನು ಅವಾಹನೆ ಮಾಡಿ, ಆರಾಧಿಸಿ ಅದರಲ್ಲಿ ಅವಗಾಹನೆ ಮಾಡಬೇಕು. ಗಂಗಾ ಶಬ್ದಕ್ಕೆ ಸದ್ಗತಿಯನ್ನು ಹೊಂದಿಸುವುದು (ಸದ್ಗತಿಂ ಗಮಯತೀತಿ ಗಂಗಾ’ ಎಂದು ಅರ್ಥ. ಈ ಶಬ್ದವು ಒಂದು ದೇವತೆಗೂ ಮತ್ತು ಅದರಿಂದ ಅಧಿಷ್ಠಿತವಾಗಿರುವ ಒಂದು ನದಿಗೂ ಅನ್ವಯಿಸುತ್ತದೆ.

‘ಅಡುಗೆ ಮಾಡಲು ಮಳೆಯ ನೀರನ್ನು ಅಥವಾ ಯಮುನಾ ಜಲವನ್ನು ಉಪಯೋಗಿಸಿದರೂ ಅದಕ್ಕೆ ಸ್ವಲ್ಪ ಗಂಗಾ ಜಲವನ್ನು ಸೇರಿಸಲಾಗುತ್ತದೆ. ‘ತೃತೀಯದಂದು ಶ್ರೀ ಕೃಷ್ಣನನ್ನು ಗಂಧದಿAದ ಅಲಂಕರಿಸಿ ಅವನಿಗೆ ಧಾನ್ಯರಾಜನಾದ ಯವ(ಜವೆ ಗೋಧಿ)ಯನ್ನು ಸಮರ್ಪಿಸುವವನು ವೈಕುಂಠವನ್ನು ಹೊಂದುತ್ತಾನೆ’ ಎಂಬುದು ಈ ಹಬ್ಬದ ಮಹತ್ವ.

ಜೈನ ಧರ್ಮಿಯರೂ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆದಿ ತೀರ್ಥಂಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಮೊದಲನೆಯ ಆಹಾರ ದಾನ ಪಡೆದ ನಿಮಿತ್ತದ ಪರ್ವದಿನ.

ಮಹಾರಾಜ ಶ್ರೇಯಾಂಸ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿನ ರೂಪದಲ್ಲಿ ಆಹಾರವನ್ನು ಕೊಟ್ಟನೆಂದೂ, ಅದರಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದೂ ಪ್ರತೀತಿ. ವೃಷಣ ತೀರ್ಥಂಕರನಿಗೆ ಅಂದು ನಡೆದ ಅಭಿಷೇಕದಲ್ಲಿ ಕಬ್ಬಿನ ಹಾಲು ವಿಶೇಷ ವಸ್ತು. ಮಿಕ್ಕಂತೆ ಗ್ರಹಸ್ಥರ ಮನೆಗಳಲ್ಲಿ ದಾನ, ಧರ್ಮ, ವೃಷಭ ಚರಿತ್ರೆಯ ಪಠಣ, ಉತ್ಸವ ನಡೆಯುತ್ತದೆ.

ವೈಶಾಖ ಶುಕ್ಲ ತೃತೀಯದಂದು ಬರುವ ಅಕ್ಷಯ ತೃತೀಯ ಕೃತ ಯುಗದ ಪ್ರಾರಂಭದ ದಿನ. ಈ ದಿನದಿಂದ ಜಗತ್ತಿನಲ್ಲಿ ಸೃಷ್ಟಿ ಆರಂಭವಾಯಿತು ಎಂಬುದು ನಂಬಿಕೆ. ವರ್ಷದ ಅತ್ಯಂತ ಪವಿತ್ರವಾದ ಮೂರುವರೆ ದಿನಗಳಲ್ಲಿ ಇದನ್ನು ಅರ್ಧ ದಿನ ಎಂದು ಕರೆಯುತ್ತಾರೆ.

ಈ ಅಕ್ಷಯ ತೃತೀಯ ಹಬ್ಬ ಸರ್ವರ ಬಾಳಲ್ಲೂ ಹರುಷವನ್ನು ತರಲಿ. ಸಂಪತ್ತು ಲಭಿಸಲಿ.

- ಹರೀಶ್ ಸರಳಾಯ, ಮಡಿಕೇರಿ.