ಸೋಮವಾರಪೇಟೆ, ಏ.೨೮: ಜಿಲ್ಲೆಯ, ಅದರಲ್ಲೂ ಸೋಮವಾರಪೇಟೆ ತಾಲೂಕಿನ ಹಲವಷ್ಟು ಕೃಷಿಕರ ಮೇಲೆ ತೂಗುಗತ್ತಿಯಂತಿರುವ ಸಿ ಮತ್ತು ಡಿ ಜಾಗ ಹಾಗೂ ಸೆಕ್ಷನ್-೪ ಸಮಸ್ಯೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಚಿಂತನೆ ನಡೆಸಿರುವ ತಾಲೂಕು ರೈತ ಹೋರಾಟ ಸಮಿತಿ, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಅಹೋರಾತ್ರಿ ಹೋರಾಟಕ್ಕೆ ನಿರ್ಧರಿಸಿದೆ.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ನಡೆದ ರೈತ ಹೋರಾಟ ಸಮಿತಿಯ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು.
ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಹಿಂದೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಎರಡು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ರೈತರಿಗೆ ಸೆಕ್ಷನ್-೪ ವಿಚಾರದಲ್ಲಿ ನೋಟೀಸ್ಗಳು ಬರುತ್ತಲೇ ಇವೆ. ಅರಣ್ಯ ಇಲಾಖಾ ಅಧಿಕಾರಿಗಳು ತೊಂದರೆ ನೀಡುವುದನ್ನು ನಿಲ್ಲಿಸಿಲ್ಲ. ಈ ಹಿನ್ನೆಲೆ ಹೋರಾಟದ ತೀವ್ರತೆಯನ್ನು ಹೆಚ್ಚಿಸಲೇಬೇಕಿದೆ ಎಂದು ಸಭೆಯಲ್ಲಿದ್ದ ಕೃಷಿಕರು ಅಭಿಪ್ರಾಯಿಸಿದರು.
ಸರ್ಕಾರದ ಸಿ ಮತ್ತು ಡಿ ಹಾಗೂ ಸೆಕ್ಷನ್ ೪ನ್ನು ತೆರವುಗೊಳಿಸಬೇಕೆಂಬ ಉದ್ದೇಶದಿಂದ ತಾಲೂಕಿನ ರೈತ ಹೋರಾಟ ಸಮಿತಿಯಿಂದ ಹಲವು ಶಾಂತಿಯುತ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೆ ಈವರೆಗೆ ಯಾವುದೇ ಸೆಕ್ಷನ್ಗಳನ್ನು ತೆರವುಗೊಳಿಸಿಲ್ಲ ಎಂದು ಸುರೇಶ್ ತಿಳಿಸಿದರು.
ಇದರೊಂದಿಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡುವ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಸೆಕ್ಷನ್ ೪ ಹೆಸರಿನಲ್ಲಿ ಏಕಾಏಕಿ ರೈತರ ಜಮೀನನ್ನು ಸರ್ವೇ ಮಾಡಲಾಗುತ್ತಿದೆ. ಇತ್ತೀಚೆಗೆ ತಾಲೂಕಿನ ಕಲ್ಕಂದೂರು, ಹರಗ, ತೋಳೂರುಶೆಟ್ಟಳ್ಳಿ, ಕೂತಿ ವ್ಯಾಪ್ತಿಯಲ್ಲಿ ಜಾಗವನ್ನು ತೆರವುಗೊಳಿಸಲು ಮೇಲಾಧಿಕಾರಿಗಳಿಂದ ನೋಟಿಸ್ ನೀಡಲಾಗುತ್ತಿದೆ. ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದರು.
ತಕ್ಷಣದಿAದಲೇ ಸಿ ಮತ್ತು ಡಿ, ಸೆಕ್ಷನ್ ೪ ನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಆರಂಭಿಕ ಹಂತವಾಗಿ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುವುದು, ಎಲ್ಲಾ ಗ್ರಾಮಗಳಿಂದಲೂ ರೈತರು ಆಗಮಿಸಿ, ಹೋರಾಟ ತೀವ್ರಗೊಳಿಸುವುದು, ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಆಗಮಿಸುವವರೆಗೂ ಹೋರಾಟ ಮುಂದುವರೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭ ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಬಿ.ಜೆ.ದೀಪಕ್, ಕಾರ್ಯದರ್ಶಿ ದಿವಾಕರ್ ಕೂತಿ, ಸಹ ಕಾರ್ಯದರ್ಶಿ ಚೌಡ್ಲು ಯೋಗೇಂದ್ರ, ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ಪ್ರಮುಖರಾದ ನಾಪಂಡ ಮುತ್ತಪ್ಪ, ರೈತ ಹೋರಾಟ ಸಮಿತಿಯ ಕೆ.ಎಂ. ಲೋಕೇಶ್, ಬಗ್ಗನ ಅನಿಲ್, ಮಿಥುನ್ ಹರಗ, ಗಿರೀಶ್ ಮಲ್ಲಪ್ಪ, ಗೌಡಳ್ಳಿ ಪ್ರಸಿ, ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.