ಶ್ರೀಮಂಗಲ, ಮಾ. ೨೬: ಮಡಿಕೇರಿ-ಕುಟ್ಟ ಅಂತರರಾಜ್ಯ ಹೆದ್ದಾರಿ, ಕೇರಳ ರಾಜ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗೆ ಕುಟ್ಟ ಪೊಲೀಸ್ ಠಾಣೆ ಬಳಿಯಿಂದ ಕೇರಳ ತೋಲ್ಪಟ್ಟಿವರೆಗೆ ರೂ. ೩.೪೦ ಕೋಟಿ ಹಾಗೂ ಮಳೆಯಿಂದ ಹಾನಿಯಾಗಿರುವ ಮಂಚಳ್ಳಿ ಸಮೀಪದ ಕುಟ್ಟ-ಶ್ರೀಮಂಗಲ ಹೆದ್ದಾರಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ರೂ. ೧.೪೦ ಕೋಟಿ ಸೇರಿ ಒಟ್ಟು ರೂ. ೪.೮೦ ಕೋಟಿ ವೆಚ್ಚದ ಎರಡು ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಕರ್ನಾಟಕ-ಕೇರಳ ಗಡಿ ಭಾಗದ ಈ ರಸ್ತೆಯು, ವಾಣಿಜ್ಯ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದ್ದು, ಈ ಹಿಂದೆ ಸುರಿದ ಭಾರಿ ಮಳೆಗೆ ಹಾನಿಗೊಂಡಿತ್ತು. ದಿನಕ್ಕೆ ಸಾವಿರಾರು ಜನರು ಪ್ರಯಾಣಿಸುವ ಈ ರಸ್ತೆಯ ದುರಸ್ತಿ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಅನುದಾನ ಒದಗಿಸಿದ್ದಾರೆ. ಭೂಮಿಪೂಜೆಯನ್ನು ಸಲ್ಲಿಸಿ ಮಾತನಾಡಿದ ಶಾಸಕರು, ಅತ್ಯಂತ ಶೀಘ್ರದಲ್ಲಿ ಈ ರಸ್ತೆಯ ಕಾಮಗಾರಿ ಮುಕ್ತಾಯಗೊಂಡು ಜನರಿಗೆ ಅನುಕೂಲವಾಗಲಿ ಎಂದರು.

ಕುಟ್ಟ-ಶ್ರೀಮAಗಲ ಹೆದ್ದಾರಿಯ ಮಂಚಳ್ಳಿ ಬಳಿ ಮಳೆಗೆ ಭೂಕುಸಿತವಾಗಿರುವ ರಸ್ತೆಗೆ ಶಾಸಕರ ವಿಶೇಷ ರೂ. ೧.೪೦ ಕೋಟಿ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿಪೂಜೆ ಸಲ್ಲಿಸಿದರು. ರಸ್ತೆಯ ಎರಡು ಬದಿಯಲ್ಲಿ ಗೇಬಿಯನ್ ತಡೆಗೋಡೆ ನಿರ್ಮಾಣ ಹಾಗೂ ಎಂಬಾಕ್‌ಮೆAಟ್ ಕಾಮಗಾರಿ ನಡೆಯಲಿದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಶ್ರೀಮಂಗಲ ಫ್ಯಾಕ್ಸ್ ಉಪಾಧ್ಯಕ್ಷ ಪಲ್ವಿನ್ ಪೂಣಚ್ಚ, ಮುಕ್ಕಾಟಿರ ನವೀನ್ ಅಯ್ಯಪ್ಪ, ಕಾಳಿಮಾಡ ಪ್ರಶಾಂತ್, ಮುಕ್ಕಾಟೀರ ಸಂದೀಪ್, ಚೊಟ್ಟೆಯಾಂಡಮಾಡ ಉದಯ, ರಾಜಶೇಖರ್, ಕೋಟ್ರಂಗಡ ಹರೀಶ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಪ್ರಮುಖರು ಉಪಸ್ಥಿತರಿದ್ದರು.