ಮಡಿಕೇರಿ, ಮಾ. ೧೭: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ಜನರು ಪರಿತಪಿಸುತ್ತಿರುವುದು ಕಂಡುಬರುತ್ತಿದೆ. ಇದರ ನಡುವೆ ಕೆಲವೆಡೆಗಳಲ್ಲಿ ಮಳೆಯಾಗುವ ಮೂಲಕ ಇಳೆ ಒಂದಿಷ್ಟು ತಂಪಾಗಿದ್ದು, ಕೆಲವು ಪ್ರದೇಶದ ಜನರು ತಂಪೆರೆದ ಮಳೆಯಿಂದಾಗಿ ನಿಟ್ಟುಸಿರುಬಿಟ್ಟಿದ್ದಾರೆ. ಮಳೆಯಾಗದ ಕಡೆಗಳಲ್ಲಿ ಜನರು ದಿನನಿತ್ಯ ಆಗಸವನ್ನು ದಿಟ್ಟಿಸುವಂತಾಗಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಕೆಲವೆಡೆಗಳಲ್ಲಿ ಕೇವಲ ಅಲ್ಪ ಪ್ರಮಾಣದಲ್ಲಿ ಮಳೆಯ ಸಿಂಚನವಾಗಿರುವುದು ಕೂಡ ಆತಂಕಕಾರಿಯಾಗಿದೆ.
ನಾಪೋಕ್ಲು, ಕುಂಜಿಲ, ಕಕ್ಕಬೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಒಂದಷ್ಟು ಮಳೆಯಾಗಿದ್ದು, ನಿನ್ನೆಕೂಡ ಮಳೆ ಬಿದ್ದಿದೆ. ಕುಟ್ಟ, ಶ್ರೀಮಂಗಲ ವ್ಯಾಪ್ತಿಯಲ್ಲೂ ಒಂದೆರಡು ದಿನಗಳ ಹಿಂದೆ ಮಳೆ ಸುರಿದಿತ್ತು. ಇದೀಗ ನಿನ್ನೆ ಮತ್ತೆ ಧಾರಾಕಾರವಾಗಿ ಮಳೆ ಸುರಿದಿದ್ದು, ಈ ವ್ಯಾಪ್ತಿಯ ಕಾಫಿ ಬೆಳೆಗಾರರು ಹೆಚ್ಚಿನ ಸಂತಸಪಡುವAತಾಗಿದೆ. ಇತರೆಡೆಗಳಲ್ಲಿ ಮಾತ್ರ ಜನರು ಮಳೆಗಾಗಿ ಪರಿತಪಿಸುತ್ತಿದ್ದಾರೆ. ಮೋಡ ಆವರಿಸುತ್ತಿದೆಯಾದರೂ ನಿರೀಕ್ಷಿತವಾಗಿರುವ ಮಳೆ ಹಲವೆಡೆಗೆ ಇನ್ನೂ ಬಿದ್ದಿಲ್ಲ.
ಭಾನುವಾರ ಕೆಲವೆಡೆ ‘ಬಂಪರ್’ ಮಳೆ
ಭಾನುವಾರ ಸಂಜೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮುಕ್ಕಾಲು ಇಂಚಿನಿAದ ಒಂದು ಮುಕ್ಕಾಲು ಇಂಚುಗಳಷ್ಟು ಬಂಪರ್ ಮಳೆ ಬಿದ್ದಿರುವ ಕುರಿತು ವರದಿಯಾಗಿದೆ. ಬಲ್ಲಮಾವಟಿ, ದೊಡ್ಡಪುಲಿಕೋಟು, ಅಯ್ಯಂಗೇರಿ, ನಾಪೋಕ್ಲು, ಹಳೆ ತಾಲೂಕು, ಚೇರಂಬಾಣೆ ಕಡೆಗಳಲ್ಲಿ ಒಂದಷ್ಟು ಮಳೆಯಾಗಿದೆ. ಎಮ್ಮೆಮಾಡು ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತವಾಗಿ ಮಳೆ ಸುರಿದಿದೆ.
ಇತ್ತ ಕುಟ್ಟ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬೀರುಗ ವ್ಯಾಪ್ತಿಯಲ್ಲೂ ಕಾಪಿ ಬೆಳೆಗಾರರಲ್ಲಿ ನೆಮ್ಮದಿ ಮೂಡಿಸುವ ರೀತಿಯಲ್ಲಿ ೧ ಇಂಚಿನಿAದ ೧.೭೫ ಇಂಚುಗಳಷ್ಟು ಮಳೆಯಾಗಿದೆ. ಕುಮಟೂರು-ಪೇರ್ಮಾಡುವಿನಲ್ಲಿ ೧.೩೦ ಇಂಚು, ಬೀರುಗ ೧.೦೩ ಇಂಚು, ಕುರ್ಚಿ ೧.೫೦ ಇಂಚು, ಶ್ರೀಮಂಗಲ ೧.೫೪ ಇಂಚು, ಕಾಕೂರು ೧.೫೦, ಮಂಚಳ್ಳಿ ೧.೨೫ ಇಂಚು ಮಳೆಯಾಗಿದೆ.
ಶ್ರೀಮಂಗಲದಲ್ಲಿ ಆಲಿಕಲ್ಲು ಮಳೆ
ಶ್ರೀಮಂಗಲ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ಭೂಮಿ ತಂಪಾಗಿದ್ದು, ಬೆಳೆಗಾರರಲ್ಲಿಯೂ ಹರ್ಷ ಮೂಡಿಸಿದೆ. ಮಧ್ಯಾಹ್ನ ಸುರಿದ ಮಳೆಯಿಂದ ಕೆಲಕಾಲ ಆಲಿಕಲ್ಲು ಸಹಿತ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಶ್ರೀಮಂಗಲ ವ್ಯಾಪ್ತಿ ಸೇರಿದಂತೆ ಗೋಣಿಕೊಪ್ಪ, ಬಾಳೆಲೆ, ಪಾಲಿಬೆಟ್ಟ ಭಾಗದಲ್ಲೂ ಮಳೆಯಾಗಿದೆ.