ಕುಶಾಲನಗರ, ಫೆ. ೧೪: ನೊಬೆಲ್ ಪುರಸ್ಕೃತ ಟಿಬೆಟಿಯನ್ ಧಾರ್ಮಿಕ ಗುರು ೧೪ನೇ ದಲೈಲಾಮ ಅವರ ಆಶೀರ್ವಾದ ಪಡೆಯಲು ರಾಜ್ಯ ಗೃಹ ಸಚಿವ ಪರಮೇಶ್ವರ್ ಕುಶಾಲನಗರ ಸಮೀಪ ಬೈಲುಕುಪ್ಪೆಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು.

ದಂಪತಿ ಸಮೇತರಾಗಿ ಆಗಮಿಸಿದ ಪರಮೇಶ್ವರ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬುದ್ಧನ ತತ್ವಗಳನ್ನು ಸಿದ್ದಾಂತಗಳನ್ನು ನಮ್ಮ ಕುಟುಂಬ ಪಾಲನೆ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಬೈಲುಕುಪ್ಪೆಯಲ್ಲಿ ತಂಗಿರುವ ದಲೈಲಾಮ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.

ರಾಜ್ಯಕ್ಕೆ ಅವರ ಭೇಟಿ ಸಂದರ್ಭ ಪ್ರತಿ ಬಾರಿ ಆಶೀರ್ವಾದ ಪಡೆದಿದ್ದೇನೆ ಎಂದ ಗೃಹ ಸಚಿವ ಪರಮೇಶ್ವರ್, ಬೈಲುಕುಪ್ಪೆಗೆ ಏಳು ವರ್ಷಗಳ ನಂತರ ದಲೈಲಾಮ ಅವರು ಭೇಟಿ ನೀಡಿದ್ದಾರೆ.

೯೦ ವರ್ಷ ದಾಟಿರುವ ದಲೈಲಾಮ ಅವರಿಗೆ ಅಲ್ಪಸ್ವಲ್ಪ ಆರೋಗ್ಯದ ಸಮಸ್ಯೆ ಇರುವುದಾಗಿ ಮಾಹಿತಿ ನೀಡಿದ ಅವರು, ಭಗವಂತ ಇನ್ನೂ ಹೆಚ್ಚಿನ ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ದಲೈಲಾಮ ಅವರಿಗೆ ಜೀವ ಬೆದರಿಕೆ ಬಗ್ಗೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತಿದೆ. ರಾಜ್ಯದ ಅತಿಥಿಯಾಗಿ ಬಂದಿರುವ ಕಾರಣ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ಅವರನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭ ಕೇಂದ್ರ ಸರ್ಕಾರದ ಗೃಹ ಇಲಾಖೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಬೈಲುಕುಪ್ಪೆಗೆ ಭೇಟಿ ನೀಡಿ ದಲೈಲಾಮ ಅವರಿಂದ ಆಶೀರ್ವಾದ ಪಡೆದರು.

ದಲೈಲಾಮ ಅವರು ಜನವರಿ ೫ ರಿಂದ ಬೈಲುಕುಪ್ಪೆ ನಿರಾಶ್ರಿತ ಟಿಬೆಟನ್ ಶಿಬಿರದ ತಶಿ ಲೋಂಪೋ ಬೌದ್ಧ ಮಂದಿರದಲ್ಲಿ ತಂಗಿದ್ದು, ತಾ. ೧೬ ರಂದು ಹುಣಸೂರು ಸಮೀಪದ ಗುರುಪುರ ಟಿಬೆಟನ್ ಶಿಬಿರಕ್ಕೆ ತೆರಳಲಿದ್ದಾರೆ.

-ಚಂದ್ರಮೋಹನ್ ಎಂ.ಎನ್.