ಕುಶಾಲನಗರ, ಜ. ೨೭: ಕುಶಾಲನಗರದ ರಂಗ ಭಾರತಿ ಕಲಾಮಂದಿರಮ್ ಆಶ್ರಯದಲ್ಲಿ ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಅಯೋಧ್ಯೆ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ಭಾರತ ದರ್ಶನ ಎಂಬ ಶೀರ್ಷಿಕೆಯಡಿ ರಾಮಾಯಣ ಮಹಾಭಾರತ ಹಾಗೂ ಭಾರತದ ಸಂಸ್ಕೃತಿಯನ್ನಾಧರಿಸಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಗಾಯತ್ರಿ ಸಭಾಂಗಣದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮವನ್ನು ಕುಶಾಲನಗರ ದ ವೈದ್ಯ ಡಾ. ಬಾಲಾಜಿ ಸೇತುರಾಮನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಕಲೆ, ಪರಂಪರೆಯ ಮಹತ್ವ ಅರಿಯಲು ಕರೆ ನೀಡಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ವಾಸವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ಮಾತನಾಡಿ, ಮಕ್ಕಳಿಗೆ ಸಂಸ್ಕಾರದ ಅವಶ್ಯಕತೆ ಬಹಳ ಇದೆ. ಮಕ್ಕಳನ್ನು ಮೊಬೈಲ್‌ನಿಂದ ದೂರಮಾಡಿ ಕಲೆಗೆ ಪ್ರೋತ್ಸಾಹ ನೀಡಿ ಎಂದು ಕಿವಿಮಾತು ಹೇಳಿದರು.

ನಿವೃತ್ತ ಚಿತ್ರಕಲಾ ಶಿಕ್ಷಕ ಉ. ರಾ. ನಾಗೇಶ್ , ವಿವಿಧ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಈ ಸಂದರ್ಭ ರಂಗ ಭಾರತೀಯ ಟ್ರಸ್ಟಿಗಳಾದ ಜನಾರ್ಧನ ಬಿ.ಆರ್, ನವ್ಯಾ ಕೆ. ಪಿ, ದೀಪಾ ಸುರೇಂದ್ರ, ಮಹೇಶ್ ಅಮೀನ್ ಮತ್ತು ಅಮೃತ್ ರಾಜ್ ಬಿ ಇದ್ದರು. ವಿವಿಧ ಶಾಲೆಗಳ ಒಟ್ಟು ೨೮೩ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಯೋಗ ಮತ್ತು ಸಂಸ್ಕೃತ ಭಾರತೀಯ ಸಂಯೋಜಕ ಮಧುಸೂದನ್ ಸೇರಿದಂತೆ ಬಾಲ ಸಂಸ್ಕಾರ ಮಂಟಪದ ಶಿಕ್ಷಕರು, ನಿವೃತ್ತ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ತಾ. ೨೬ ರಂದು (ಇಂದು) ಸಂಜೆ ೪ ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ.