ಸೋಮವಾರಪೇಟೆ, ನ. ೨೪: ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸರ್ಕಾರಿ ಜಮೀನು ಹಾಗೂ ಸಿ. ಮತ್ತು ಡಿ. ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸಂಬAಧ ಉದ್ಬವಿಸಿರುವ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲೇ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಲಿದೆ.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮೈಸೂರಿನಲ್ಲಿರುವ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಗೆ ತೆರಳಿ, ಅರಣ್ಯ ವ್ಯವಸ್ಥಾಪನಾಧಿಕಾರಿ (ತಾತ್ಕಾಲಿಕ) ರೇಣುಕಾಂಬ ಅವರನ್ನು ಭೇಟಿ ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದು, ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.

ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸರಕಾರಿ ಜಮೀನುಗಳನ್ನು ಅರಣ್ಯವನ್ನಾಗಿ ಮಾಡುವ ಉದ್ದೇಶದಿಂದ ತಾಲೂಕಿನ ಕೆಲವು ಗ್ರಾಮಗಳ ಸ್ಥಳೀಯ ಆಡಳಿತ ಕಚೇರಿಗೆ ಈಗಾಗಲೇ ಪತ್ರಗಳು ಬಂದಿವೆ. ಇದರೊಂದಿಗೆ ಆಕ್ಷೇಪಣೆಗಳ ಸಲ್ಲಿಕೆಗೆ ತಿಳಿಸಲಾಗಿದೆ. ಈ ಹಿನ್ನೆಲೆ ಹಲವಷ್ಟು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದ್ದು, ರೈತರು ಸಾಗುವಳಿ ಮಾಡಿಕೊಂಡಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯಕ್ಕೆ ಒಪ್ಪಿಸಬಾರದು ಎಂದು ಪದಾಧಿಕಾರಿಗಳು ಮನವಿ ಮಾಡಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕಾಳಪ್ಪ ಅವರ ನೇತೃತ್ವದಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.

ರೈತರು ಅನೇಕ ವರ್ಷಗಳಿಂದ ಗದ್ದೆ, ತೋಟಗಳನ್ನು ಮಾಡಿಕೊಂಡು ಜೀವನ ಕಂಡುಕೊAಡಿದ್ದಾರೆ. ಈ ಭಾಗದಲ್ಲಿ ಬಡ ರೈತರೇ ಹೆಚ್ಚಿದ್ದು, ತಾವು ಕೃಷಿ ಮಾಡಿಕೊಂಡಿರುವ ಭೂಮಿಯನ್ನು ಅಧಿಕಾರಿಗಳು ಸಿ ಮತ್ತು ಡಿ ಎಂದು ವರ್ಗಾಯಿಸಿ, ಇದೀಗ ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿರುವುದು ಸರಿಯಲ್ಲ. ಒಂದು ವೇಳೆ ಇಂತಹ ಕ್ರಮ ನಡೆದದ್ದೇ ಆದಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಎಂದು ಪದಾಧಿಕಾರಿಗಳು ಗಮನ ಸೆಳೆದರು.

ಇದಕ್ಕೆ ಸ್ಪಂದಿಸಿದ ಅರಣ್ಯ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರು, ಮುಂದಿನ ಕೆಲವೇ ದಿನಗಳಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳನ್ನು ಒಳಗೊಂಡ ತಂಡವು ಸೋಮವಾರಪೇಟೆಗೆ ಆಗಮಿಸಿ ಪ್ರತ್ಯಕ್ಷವಾಗಿ ಪರಿಶೀಲಿಸಲಾಗುವುದು ಹಾಗೂ ವಾಸ್ತವಿಕತೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಇದೇ ವಿಷಯದ ಬಗ್ಗೆ ಸ್ಥಳೀಯ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ರೈತರಿಗೆ ಕಿರುಕುಳ ನೀಡುತ್ತಿರುವ ಬಗ್ಗೆಯೂ ಗಮನಕ್ಕೆ ತಂದ ಸಂದರ್ಭ, ಸ್ಪಂದಿಸಿದ ವ್ಯವಸ್ಥಾಪನಾಧಿಕಾರಿಗಳು, ದೂರವಾಣಿ ಕರೆ ಮಾಡಿ ಅರಣ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಆಗುವವರೆಗೆ ಸ್ಥಳೀಯರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಸೂಚಿಸಿದ ರೇಣುಕಾಂಬ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಕ್ಷಣ ಪತ್ರ ಬರೆಯುವುದಾಗಿ ತಿಳಿಸಿದರು.

ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಹೈಕೋರ್ಟ್ ವಕೀಲ ಅಮೃತೇಶ್, ನಿವೃತ್ತ ತಹಶೀಲ್ದಾರ್ ಜಯರಾಮ್, ಹೂವಯ್ಯ ಮಾಸ್ಟರ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಉಪಾಧ್ಯಕ್ಷ ಕೆ.ಎನ್. ದೀಪಕ್, ತ್ರಿಶೂಲ್ ಹರಗ, ಆದರ್ಶ್ ಹೆಮ್ಮನಗದ್ದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.