ಕುಶಾಲನಗರ, ನ. ೨೪: ಹೊರ ಜಿಲ್ಲೆ ಪ್ರವಾಸಿಗರಿಗೆ ಟೂರಿಸ್ಟ್ ಏಜೆಂಟ್ವೊಬ್ಬ ಸಾವಿರಾರು ರೂ.ಗಳ ವಂಚನೆ ಮಾಡಿ ಪರಾರಿಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಿಂದ ಎರಡು ಬಸ್ಸುಗಳಲ್ಲಿ ಕುಟುಂಬ ಸದಸ್ಯರು ಶನಿವಾರ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿದ್ದು ಅಲ್ಲಿನ ಏಜೆಂಟ್ ಒಬ್ಬನ ಮುಖಾಂತರ ಕುಶಾಲನಗರ ಸಮೀಪ ಮಾದಾಪಟ್ಟಣ ಬಳಿ ರೆಸಾರ್ಟ್ನಲ್ಲಿ ಕೊಠಡಿ ಮೀಸಲಿರಿಸಿ ಊಟ ಉಪಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು ನೂರಕ್ಕೂ ಅಧಿಕ ಸದಸ್ಯರು ರೆಸಾರ್ಟ್ ಖರ್ಚು ವೆಚ್ಚಕ್ಕಾಗಿ ಏಜೆಂಟ್ ಮೂಲಕ ಸುಮಾರು ೫೦ ಸಾವಿರಕ್ಕೂ ಅಧಿಕ ಹಣ ಪಾವತಿಸಿದ್ದರು. ಏಜೆಂಟ್ ಅಲ್ಪ ಪ್ರಮಾಣದ ಮುಂಗಡ ಹಣವನ್ನು ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಾತ್ರ ರೆಸಾರ್ಟ್ಗೆ ಪಾವತಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಹೋಟೆಲ್ ಮಾಲೀಕರಿಗೆ ಸೂಚಿಸಿದ್ದು, ಉಳಿದಂತೆ ಬಾಕಿ ಮೊತ್ತ ನೀಡಬೇಕಾದ ವೇಳೆ ಏಜೆಂಟ್ ನಾಪತ್ತೆಯಾಗಿದ್ದು ಆತನ ಮೊಬೈಲ್ ನಾಟ್ ರೀಚೆಬಲ್ ಆಗಿತ್ತು.
ವಿಷಯ ಅರಿತ ಪ್ರವಾಸಿಗರು ಆಘಾತಕ್ಕೊಳಗಾಗಿ ಎರಡು ದಿನಗಳ ಊಟೋಪಚಾರದ ವೆಚ್ಚವನ್ನು ರೆಸಾರ್ಟ್ ಮಾಲೀಕರಿಗೆ ಪಾವತಿಸಲು ಹಣವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.
ನಂತರ ಪ್ರಕರಣ ಕುಶಾಲನಗರ ಪಟ್ಟಣ ಠಾಣೆ ಪೊಲೀಸರ ತನಕ ತಲುಪಿದ್ದು, ಮುಂಗಡ ಹಣ ಪಡೆದು ಪರಾರಿಯಾದ ಪ್ರವಾಸಿ ಏಜೆಂಟ್ ಶಿವಮೊಗ್ಗದ ವಿವೇಕ್ ಎಂಬಾತನ ಫೋನ್ ಮಾತ್ರ ಇನ್ನೂ ರಿಚೆಬಲ್ ಆಗದೇ ಆತನ ಪತ್ತೆ ಕಾರ್ಯ ಮುಂದುವರಿದಿದೆ.
ಇತ್ತ ಸಮಸ್ಯೆಯ ಸುಳಿಗೆ ಸಿಲುಕಿದ ಪ್ರವಾಸಿಗರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಕ್ರೋಢೀಕರಿಸಿ, ತಮ್ಮ ಊರಿನಿಂದ ಆನ್ಲೈನ್ ಮೂಲಕ ಹಣ ಪಡೆದು ರೆಸಾರ್ಟ್ ಮಾಲೀಕರಿಗೆ ಪಾವತಿಸಲು ಹೆಣಗಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಶಾಲನಗರ ಪೊಲೀಸರು ನಾಪತ್ತೆಯಾಗಿರುವ ಏಜೆಂಟ್ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. -ಚಂದ್ರಮೋಹನ್