ಸೋಮವಾರಪೇಟೆ, ನ. ೨೪: ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಂದರ್ಭದಲ್ಲಿ ಪಟ್ಟಣದ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ನೂತನವಾಗಿ ರೂ. ೧೪.೫೯ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಸಂಘದ ಅಧ್ಯಕ್ಷೆ ಜಲಜಾ ಶೇಖರ್ ಉದ್ಘಾಟಿಸಿದರು.
ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹೆಚ್ಚು ಸಬಲೀಕರಣವಾಗಬೇಕಾದರೆ ತಮ್ಮನ್ನು ತಾವು ಸಹಕಾರ ಸಂಘಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ಮಹಿಳೆಯರು ಸಹಕಾರಿ ಮನೋಭಾವನೆಯಡಿ ಒಂದಾಗುವ ವೇದಿಕೆಯನ್ನು ಒದಗಿಸಿದೆ. ಎಲ್ಲರೂ ಒಟ್ಟಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು. ನಮ್ಮ ಸಂಘವು ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸದಸ್ಯತ್ವವನ್ನು ಹೆಚ್ಚಿಸಬೇಕೆಂದು ಅಭಿಪ್ರಾಯಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಜಯಂತಿ ಶಿವಕುಮಾರ್, ಮಾಜಿ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಿರ್ದೇಶಕರುಗಳಾದ ಬೇಬಿ ಚಂದ್ರಹಾಸ್, ಕವಿತ ವಿರೂಪಾಕ್ಷ, ಸಂಧ್ಯಾ ಕೃಷ್ಣಪ್ಪ, ಶೋಭ ಶಿವರಾಜ್, ಉಮಾ ರುದ್ರಪ್ರಸಾದ್, ಲೀಲಾ ನಿರ್ವಾಣಿ, ವಿದ್ಯಾ ಸೋಮೇಶ್, ರೂಪಶ್ರೀ ರವಿಶಂಕರ್, ಮೀನಾಕ್ಷಿ ನಾಗೇಂದ್ರಕುಮಾರ್, ದಾಕ್ಷಾಯಿಣಿ ಶಿವಾನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಚಂದ್ರಶೇಖರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.