ಸೋಮವಾರಪೇಟೆ, ಅ. ೩೦: ಅಕಾಲಿಕ ಮಳೆ, ಹವಾಮಾನ ವೈಪ್ಯರೀತ್ಯದಿಂದ ಕಾಫಿ ತೋಟಗಳು ರೋಗಪೀಡಿತವಾಗಿವೆೆ. ರೈತರು ಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಕಾಫಿ ಬೆಳೆಗಾರರ ೧೦ ಹೆ.ಚ್.ಪಿ. ಪಂಪ್ಸೆಟ್ಗಳ ಎಲ್.ಟಿ.೪.ಸಿ. ಸಂಪರ್ಕದ ಬಾಕಿ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಗೌಡಳ್ಳಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸಮೀಪದ ಗೌಡಳ್ಳಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಜಿ.ಎಸ್. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ರೈತರು ಸಮಸ್ಯೆ ಹೇಳಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಿರಂತರ ಕಾಫಿ ಫಸಲು ಹಾನಿಯಾಗುತ್ತಿದೆ. ಬೆಳೆಗಾರರು ಸಾಲಗಾರರಾಗಿದ್ದಾರೆ. ಕೆಲ ವಾಣಿಜ್ಯ ಬ್ಯಾಂಕ್ಗಳು ಸಾಲಕ್ಕೆ ಅಡ ಇಟ್ಟಿರುವ ಕಾಫಿ ತೋಟಗಳನ್ನು ಹರಾಜು ಹಾಕುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಕೂಡಲೆ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಬೆಳೆಗಾರರಾದ ಶುಂಠಿ ಗ್ರಾಮದ ಎಸ್.ಬಿ. ಭರತ್ಕುಮಾರ್, ಹಣಗೋಡು ಗ್ರಾಮದ ಎಚ್.ಆರ್. ಸುರೇಶ್, ಹಿರಿಕರ ಗ್ರಾಮದ ಹೆಚ್.ಈ. ರಮೇಶ್, ಕೂಗೂರು ಗ್ರಾಮದ ಸಂದೀಪ್ ಮತ್ತಿತರರು ಆಗ್ರಹಿಸಿದರು.
ಪಂಪ್ಸೆಟ್ಗಳ ಮೂಲಕ ನೀರನ್ನು ಹಾರಿಸಿ, ಹೂ ಅರಳಿಸಬೇಕು. ಬ್ಯಾಕಿಂಗ್ ನೀರು ಕೊಡಬೇಕು. ಕಾಫಿ ಉತ್ಪಾದನೆಯನ್ನು ಹೆಚ್ಚಿಸಬೇಕಾದರೆ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಸೆಸ್ಕ್ನ ಬಡ್ಡಿ, ಚಕ್ರಬಡ್ಡಿಯಿಂದ ಈಗಾಗಲೇ ಕಾಫಿ ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಲಕ್ಷ ದಾಟುತ್ತಿದೆ. ಈ ಕಾರಣದಿಂದ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಬೆಳೆಗಾರರು ಆಗ್ರಹಿಸಿದರು. ಕಾಫಿ ವಿದೇಶಿ ವಿನಿಮಯದಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಅಂದಾಜು ರೂ. ೫ ಸಾವಿರ ಕೋಟಿ ಆದಾಯ ಬರುತ್ತಿದೆ. ಉಚಿತ ವಿದ್ಯುತ್ ಹಾಗೂ ಬಾಕಿ ಬಿಲ್ ಮನ್ನಾ ಮಾಡಲು ಕೇವಲ ರೂ. ೩೦೦ ಕೋಟಿ ಸಾಕು. ಈ ಬಗ್ಗೆ ಸರ್ಕಾರ ಕೂಡಲೆ ಕ್ರಮಕೈಗೊಳ್ಳಬೇಕೆಂದು ಬೆಳೆಗಾರ ಭರತ್ ಒತ್ತಾಯಿಸಿದರು.
ಕೊಡಗಿನ ಕಿತ್ತಳೆ ಬೆಳೆಗಾರರಿಗೆ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಕೊಡಗಿನ ಬೀಗ ಹಾಕಬೇಕು. ರೋಗಿಗಳು ಇಲ್ಲಿಗೆ ಬಂದು ವೈದ್ಯರನ್ನು ಕಾಯುವುದು ತಪ್ಪುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೂಗೂರು ಗ್ರಾಮದ ಬೆಟ್ಟದಲ್ಲಿ ಆನೆ ಕಂದಕ ತೋಡಲಾಗಿದೆ. ಮಳೆಗಾಲದಲ್ಲಿ ಕಂದಕದಲ್ಲಿ ನೀರು ಸಂಗ್ರಹವಾಗಿ ಬೆಟ್ಟ ಕುಸಿಯುವ ಭೀತಿ ಇದೆ. ಬೆಟ್ಟ ಕುಸಿದರೆ ಅರಣ್ಯ ಇಲಾಖೆ ನೇರ ಜವಾಬ್ದಾರಿಯಾಗಬೇಕು. ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ದೊಡ್ಡ ಅನಾಹುತವಾಗಬಹುದು ಎಂದು ಕೂಗೂರು ಸಂದೀಪ್ ಎಚ್ಚರಿಸಿದರು.
ಸೋಲಾರ್ ತಂತಿ ಬೇಲಿಯ ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದರು. ಸೋಲಾರ್ ತಂತಿ ಬೇಲಿ ನಿರ್ವಹಣೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಒಂದಷ್ಟು ಸಮಸ್ಯೆಯಾಗಿತ್ತು. ಕಂದಕದಲ್ಲಿ ನೀರು ಸಂಗ್ರಹದ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿ.ಆರ್.ಎಫ್.ಒ. ಎಂ.ಜೆ. ಸೂರ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆಯಿಂದ ನಡೆಯುವ ಕೆಲ ರಸ್ತೆ ಕಾಮಗಾರಿಗಳು ಒಂದೇ ವರ್ಷದಲ್ಲಿ ಹಾಳುಬಿದ್ದು ಹೋಗುತ್ತವೆ. ಇದಕ್ಕೆ ಇಂಜಿನಿಯರ್ ಅಥವಾ ಗುತ್ತಿಗೆದಾರರು ಕಾರಣಕರ್ತರೇ ಎಂದು ರೈತ ಸಂದೀಪ್ ಪ್ರಶ್ನಿಸಿದರು. ಇನ್ನಾದರೂ ಗುಣಮಟ್ಟದ ಕೆಲಸವಾಗಬೇಕು ಎಂದು ಹೇಳಿದರು. ಕಾಮಗಾರಿ ಕಳಪೆಯಾಗಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದು ಇಂಜಿನಿಯರ್ ಸಲೀಂ ಭರವಸೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಬ್ರೋಕರ್ ಮೂಲಕ ಹೋದರೆ ಒಂದೇ ತಿಂಗಳಲ್ಲಿ ಕೆಲಸವಾಗುತ್ತವೆ. ಅದೇ ರೈತ ನೇರವಾಗಿ ಹೋದರೆ ಎರಡು ಮೂರು ವರ್ಷ ಅಲೆಯಬೇಕಾಗುತ್ತದೆ ಎಂಬ ದೂರಿದ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಲೆಕ್ಕಿಗ ಸಂತೋಷ್ ಅವರು, ರೈತರ ಕೆಲಸಕ್ಕೆ ವಿಳಂಬವಾದರೆ ನೇರವಾಗಿ ಮೇಲಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬೇಕು. ಅಧಿಕಾರಿಗಳು ಪರಿಹಾರಗಳನ್ನು ಸೂಚಿಸುತ್ತಾರೆ. ಅದು ಬಿಟ್ಟು ಬ್ರೋಕರ್ ಮೂಲಕ ಹೋದರೆ ಪ್ರಯೋಜನವಿಲ್ಲ. ಇನ್ನು ಪ್ರತಿ ಕೆಲಸಗಳು ಆನ್ಲೈನ್ ಮೂಲಕ ನಡೆಯುತ್ತವೆ ಎಂದರು.
ಕೃಷಿ ಅಬಕಾರಿ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆ ಸೂಚಿಸಿತು.
ಸಭೆಯಲ್ಲಿ ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಸುಮಾ, ರೋಹಿಣಿ, ವಿಶಾಲಾಕ್ಷಿ, ಮಂಜುನಾಥ್, ವೆಂಕಟೇಶ್, ರವಿಕುಮಾರ್, ಅಜ್ಜಳ್ಳಿ ನವೀನ್, ಗಣೇಶ್, ಪಿ.ಡಿ.ಓ. ಲಿಖಿತಾ, ನೋಡೆಲ್ ಅಧಿಕಾರಿ ಸತೀಶ್ ಇದ್ದರು. ಬಿಲ್ ಕಲೆಕ್ಟರ್ ಹೂವಯ್ಯ ಅಭಿವೃದ್ಧಿ ಕಾಮಗಾರಿಗಳ ವಿವರ ಓದಿದರು.