ಕುಶಾಲನಗರ, ಅ. ೧: ದೇಹದಲ್ಲಿ ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಅಧ್ಯಾತ್ಮಿಕ ಆರೋಗ್ಯಗಳು ಇಲ್ಲದಿದ್ದಲ್ಲಿ ಆರೋಗ್ಯವಂತ ಸಮಾಜ ಕಾಣಲು ಅಸಾಧ್ಯ ಎಂದು ಕನ್ನಡ ವಿದ್ವಾಂಸರು ಹಾಗೂ ಖ್ಯಾತ ವಾಗ್ಮಿಗಳಾದ ಪ್ರೊ. ಎಂ ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ‘ಛಾಯಾ ಕುಟುಂಬ’ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಛಾಯಾಗ್ರಾಹಕರು ತಾಂತ್ರಿಕತೆ ತಿಳಿಯುವ ಮೂಲಕ ವೃತ್ತಿ ಉಳಿಯೋದು ಸಾಧ್ಯ ಎಂದ ಕೃಷ್ಣೇಗೌಡ ಅವರು ಹಳೆಯ ಫೋಟೋಗಳ ಮೂಲಕ ಇತಿಹಾಸದ ಮೆಲುಕು ಸಾಧ್ಯ. ಕ್ಷಣಗಳನ್ನು ಹಿಡಿದಿಡುವ ಶಕ್ತಿ ಛಾಯಾಗ್ರಾಹಕನಿಗೆ ಇದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವರಾದ ಕೆ. ವೆಂಕಟೇಶ್, ಛಾಯಾಗ್ರಾಹಕರ ವೃತ್ತಿ ಅದ್ಭುತ ಶಕ್ತಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ನಡುವೆ ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಪ್ರಯತ್ನ ನಡೆಯಬೇಕು. ಹೊಸ ತಂತ್ರಜ್ಞಾನ ಬಳಕೆ ಬಗ್ಗೆ ಅರಿವು ಪಡೆಯುವ ಮೂಲಕ ತಮ್ಮ ಕಾಯಕದಲ್ಲಿ ಯಶಸ್ಸು ಗಳಿಸಲು ಕರೆ ನೀಡಿದರು.
ದಾನಿಗಳ ಮೂಲಕ ಸಂಘಕ್ಕೆ ಜಿಲ್ಲೆಯ ಯಾವುದೇ ಒಂದು ಭಾಗದಲ್ಲಿ ನಿವೇಶನ ಕಲ್ಪಿಸುವಂತೆ ಸಂಘದ ಪ್ರಮುಖರಾದ ಕೆ.ಎಸ್. ನಾಗೇಶ್ ಮನವಿ ಮಾಡಿದರು. ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಆರ್. ಮಹಾದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ನಟರಾದ ಸೀನು ಮಿತ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಸ್. ನಾಗೇಶ್, ಉದ್ಯಮಿ ಎಸ್ ಎಲ್ ಎನ್ ವಿಶ್ವನಾಥನ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಉದ್ಯಮಿ ಮೊಹಮ್ಮದ್ ಸಾಧಿಕ್, ಸಂಘದ ಪ್ರಧಾನ ಕಾರ್ಯದರ್ಶಿ ಮುರಳಿ, ಉಪಾಧ್ಯಕ್ಷ ರೋಶನ್ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಗುಡ್ಡೆಮನೆ ವಿಶ್ವಕುಮಾರ್, ಕೆ.ಪಿ. ನಾಗೇಂದ್ರ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರಿಕೆಟ್ ಮತ್ತು ಇತರ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.