ಸಿದ್ದಾಪುರ, ಏ. ೨೬: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಾಲ್ನೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಂಟಿಕೊಪ್ಪ ಗ್ರಾಮದ ಮತ್ತಿಕಾಡು ನಿವಾಸಿ ಶಂಕರ ಎಂಬವರ ಪುತ್ರ ನಿಶಾಂತ್ (೨೫) ಎಂಬಾತ ಮೃತ ಯುವಕ. ತನ್ನ ನಾಲ್ವರು ಸ್ನೇಹಿತರೊಂದಿಗೆ ವಾಲ್ನೂರು ಗ್ರಾಮದ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ರಾತ್ರಿವರೆಗೂ ಹುಡುಕಾಡಿದರೂ, ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಎಂದು ಪೊಲೀಸರು ತಿಳಿಸಿದ್ದಾರೆ. ತಾ.೨೭ರಂದು (ಇಂದು) ಮತ್ತೆ ಹುಡುಕಾಟ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ದುಬಾರೆಯ ಬೋಟ್ ತರಿಸಿ ಹುಡುಕಾಟ ನಡೆಸಲಾಯಿತು. ಗುಂಡಿ ಇರುವ ಜಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಸ್ಥಳದಲ್ಲಿ ಮೃತ ದೇಹ ಹುದುಗಿರಬಹುದು ಎಂದು ಶಂಕಿಸಲಾಗಿದೆ. -ವಾಸು