ಕಣಿವೆ, ಏ. ೨೩: ಕಾಡಾನೆ ಧಾಳಿಯಿಂದ ವಾಸದ ಮನೆಗೆ ಹಾನಿಯಾಗಿರುವ ಘಟನೆ ಸೋಮವಾರ ರಾತ್ರಿ ಯಡವನಾಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಧಾ ರಮೇಶ್ ಎಂಬವರ ಮನೆಯ ಆವರಣದಲ್ಲಿ ದಿಢೀರನೇ ಎದುರಾದ ಕಾಡಾನೆಯನ್ನು ಕಂಡು ಬೆಚ್ಚಿ ಬಿದ್ದ ಮನೆ ಮಂದಿ ಕಿರುಚಾಡಿ ಮನೆಯ ಮುಂದೆ ಲೈಟ್ ಹಾಕಿದ್ದನ್ನು ಕಂಡ ಕಾಡಾನೆ ಏಕಾಏಕಿ ಮನೆಯತ್ತ ನುಗ್ಗಿ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟುಗಳನ್ನು ಕಿತ್ತೆಸೆದಿದೆ.

ಕಾಡಾನೆ ಧಾಳಿ ಮಾಡಿ ಹಾನಿಪಡಿಸಿದ ವಿಚಾರವನ್ನು ಸ್ಥಳೀಯ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದು ಸ್ಥಳಕ್ಕೆ ತಾಲೂಕಿನ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ದಿನವಿಡೀ ಕಾದು ಕುಳಿತರೂ ಪ್ರಯೋಜನ ವಾಗಲಿಲ್ಲ ಎಂದು ಯಡವನಾಡು ಗ್ರಾಮದ ಕೃಷಿಕರಾದ ಪ್ರವೀಣ್, ವರದರಾಜೇ ಅರಸು, ರಮೇಶ್, ಲವ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.