ಕುಶಾಲನಗರ, ಫೆ. ೨೨: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್ ಕರೆ ನೀಡಿದರು. ಅವರು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಯುವ ಪೀಳಿಗೆಯ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದ ಅವರು ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಸಮಯ ವ್ಯರ್ಥ ಮಾಡಬಾರದು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಹೇಳಿದರು.
ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಸತೀಶ್ ಕಾಳೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ಮಾಜಿ ಕಾರ್ಯಕ್ರಮ ಸಂಯೋಜನಾಧಿಕಾರಿ ಹಾಗೂ ವಿಭಾಗಾಧಿಕಾರಿಗಳಾದ ಉಮಾಪತಿ, ಪಾಲಿಟೆಕ್ನಿಕ್ ರಿಜಿಸ್ಟರ್ ಕೆ.ಎ. ಮೇರಿ ಮಕ್ಕಳಿಗೆ ಹಿತವಚನ ನುಡಿದರು. ಶಿಬಿರ ಅಧಿಕಾರಿಗಳಾದ ಕೆ.ಪಿ. ವಿನಯ್, ಜಿ. ಜಯಣ್ಣ, ಡಾ. ರಾಜೇಶ್, ಯಶವಂತ್, ಪ್ರಸನ್ನ ಕುಮಾರ್ ಇದ್ದರು.
ಏಳು ದಿನಗಳ ಕಾಲ ಶಿಬಿರದ ಮೂಲಕ ಗ್ರಾಮದ ನೈರ್ಮಲೀಕರಣ, ಸ್ವಚ್ಛ ಭಾರತ ನಿರ್ಮಾಣದ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವುದು, ಕಾಲೇಜು ಆವರಣ ಸ್ವಚ್ಛಗೊಳಿಸುವುದು, ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವುದು, ಗ್ರಾಮೀಣ ಜನರಿಗೆ ಉಚಿತ ತಾಂತ್ರಿಕ ಸೇವೆ ನೀಡುವುದು, ಸ್ವಯಂಸೇವಕರಿಗೆ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಅಧಿಕಾರಿಗಳು ತಿಳಿಸಿದ್ದಾರೆ.