ಸಿದ್ದಾಪುರ, ಮಾ.೨೪ : ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಜಾಗಕ್ಕೆ ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮೂನೆ ೯/೧೧ಎ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್ ಶಾಹಿನುಲ್ಲಾ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಟಿ.ಸಿ ಸಂಖ್ಯೆ ೧೩೧/೧ ಕ್ಕೆ (೧೫ ಸೆಂಟ್) ನಮೂನೆ ೯/೧೧ಎ ನೀಡುವಂತೆ ಗುಹ್ಯ ಅಗಸ್ತೆö್ಯÃಶ್ವರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸಿದ್ದಾಪುರದ ಗ್ರಾಮ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ೧೨.೦೧.೨೦೨೩ ರಂದು ನಡೆದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ, ದಾಖಲಾತಿ ಪರಿಶೀಲಿಸಿದ ಸಂದರ್ಭದಲ್ಲಿ ಆರ್.ಟಿ.ಸಿಯಲ್ಲಿ ಜಾಗದ ಮಾಹಿತಿ ಸರ್ಕಾರದವರು ಎಂದು ನಮೂದಾಗಿದ್ದರಿಂದ ೯/೧೧ ಎ ನೀಡಲು ಸಾಧ್ಯವಿಲ್ಲವೆಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಇವೆಲ್ಲವನ್ನು ಉಲ್ಲಂಘಿಸಿ ಗ್ರಾಮ ಪಂಚಾಯಿತಿ ಪಿಡಿಓ ೯/೧೧ ಎ ನೀಡಿರುವುದಾಗಿ ಆರೋಪಿಸಿದ ಅವರು ಇದಕ್ಕೆ ಸಂಬAಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಸರಕಾರಿ ಜಾಗಕ್ಕೆ ನಮೂನೆ ೯/೧೧ಎ ನೀಡಿರುವುದರ ಹಿಂದೆ ಹಲವು ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದು, ಭಾರೀ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಶಾಹಿನುಲ್ಲಾ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

೧೫.೦೨.೨೦೧೮ ರಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಇ-ಸ್ವತ್ತು ತಂತ್ರಾAಶಕ್ಕೆ ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿರುವ ಪ್ರಕಾರವಾಗಿಯೇ ಕಾನೂನಿನ ಚೌಕಟ್ಟಿನಲ್ಲಿ ೯/೧೧ಎ ನೀಡಲಾಗಿದೆ. ಆದರೆ ಗ್ರಾಮ ಪಂಚಾಯಿತಿಯ ನಿರ್ಣಯ ಪುಸ್ತಕದಲ್ಲಿ ಕಾರ್ಯದರ್ಶಿಯ ಕೈ ತಪ್ಪಿನಿಂದ ೯/೧೧ಎ ಕೊಡಲು ಸಾಧ್ಯವಿಲ್ಲವೆಂದು ಬರೆಯಲಾಗಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ಮನಮೋಹನ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.