ಮಡಿಕೇರಿ, ಜ. ೨೪: ಹುಣಸೂರಿನ ಹನಗೋಡು ಬಳಿ ೨೦.೪.೨೦೨೨ ರಂದು ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟ ನಾಲ್ವರು ವ್ಯಕ್ತಿಗಳ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರ ಧನ ಬಿಡುಗಡೆ ಮಾಡಿದೆ.

ಪಾಲಿಬೆಟ್ಟದ ಮೇಕೂರು ಹೊಸ್ಕೇರಿ ಗ್ರಾಮ, ಶಾಸ್ತಿç ಹಳ್ಳಿಯ ರಾಜೇಶ್ ಹೆಚ್.ಎಸ್., ಅನಿಲ್ ಎಂ.ಆರ್, ದಿಲೀಪ್ ಅಲಿಯಾಸ್ ಪಿಲೀಪ್, ಜಿ.ಎ. ಬಾಬು ಎಂಬವರುಗಳು ದಿನಾಂಕ ೨೦.೦೪.೨೦೨೨ ರಂದು ಹುಣಸೂರಿನಿಂದ ಮದುವೆ ಮುಗಿಸಿ ಹಿಂತಿರುಗುವಾಗ ಹುಣಸೂರು ಗ್ರಾಮಾಂತರ ಹನಗೋಡು ಹೋಬಳಿ ಬಳಿ ಹುಣಸೂರು ಮುಖ್ಯ ರಸ್ತೆಯಲ್ಲಿ ಬೊಲೆರೊ ವಾಹನ ದೊಡ್ಡ ಗೋಣಿಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಬೇರೆ ಯಾವುದೇ ಆರ್ಥಿಕ ಮೂಲಗಳಿರುವುದಿಲ್ಲವಾದ್ದರಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಗರಿಷ್ಠ ಮೊತ್ತವನ್ನು ಮಂಜೂರು ಮಾಡುವಂತೆ ಶಾಸಕ ಕೆ.ಜಿ. ಬೋಪಯ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ತಲಾ ರೂ. ೨ ಲಕ್ಷಗಳಂತೆ ಒಟ್ಟು ೮ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಪರಿಹಾರ ಹಣವನ್ನು ಆರ್‌ಟಿಜಿಎಸ್ ಮೂಲಕ ಜಿಲ್ಲಾಧಿಕಾರಿಗಳ ಖಾತೆಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಪಿ.ಎ. ಗೋಪಾಲ್ ತಿಳಿಸಿದ್ದಾರೆ.