ಗೋಣಿಕೊಪ್ಪ ವರದಿ, ಡಿ. ೨೮ : ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಗೋಣಿಕೊಪ್ಪ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವತಿಯಿಂದ ರೂ. ೨ ಲಕ್ಷ ಚೆಕ್ ನೀಡಲಾಯಿತು.

ವಿಮೆ ಯೋಜನೆಯ ಫಲಾನುಭವಿ ಹೈಸೊಡ್ಲೂರು ಗ್ರಾಮದ ಎಂ. ಸಿ. ದಮಯಂತಿ ಅವರ ನಿಧನ ಹಿನ್ನೆಲೆ, ಅವರ ಸಹೋದರ ತೂಚಮಕೇರಿ ಗ್ರಾಮದ ಕೆ. ಎಂ. ಮುರುಗೇಶ್ ಅವರಿಗೆ ಚೆಕ್ ಹಸ್ತಾಂತರ ಮಾಡಲಾಯಿತು.

ಶಾಖಾ ಪ್ರಬಂಧಕ ಎನ್. ಅರ್ಜುನ್ ವಿಜಯ್ ಮಾತನಾಡಿ, ಸರ್ಕಾರದ ಪಿಎಂಜೆಬಿವೈ ವಿಮೆ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕಿದೆ. ೧೮ ವರ್ಷದಿಂದ ೫೦ ವರ್ಷದವರು ವಿಮೆ ಆರಂಭಿಸಬಹುದಾಗಿದ್ದು, ವರ್ಷಕ್ಕೆ ರೂ. ೪೩೬ ಖಾತೆಯಿಂದ ಬ್ಯಾಂಕ್ ತೆಗೆದುಕೊಳ್ಳುತ್ತದೆ. ಯಾವುದೇ ರೀತಿಯ ಸಾವು ಸಂಭವಿಸಿದರೂ, ರೂ. ೨ ಲಕ್ಷ ರೂ. ವಿಮೆ ದೊರೆಯುತ್ತದೆ ಎಂದು ತಿಳಿಸಿದರು.

ದಿ. ದಮಯಂತಿ ಅವರ ಪತಿ ಎಂ.ಕೆ. ಚಂಗಪ್ಪ, ಸಹಾಯಕ ವ್ಯವಸ್ಥಾಪಕ ಬಿ.ಸಿ. ಶಿವಪ್ರಸಾದ್, ಕಚೇರಿ ಗುಮಾಸ್ತೆ ಕೆ.ಪಿ. ಜಶ್ಮಿ ಇದ್ದರು.