ಶನಿವಾರಸಂತೆ, ಅ. ೨: ವ್ಯಕ್ತಿಯೋರ್ವನ ಮೇಲೆ ಹಲ್ಲೆ ಹಾಗೂ ಬೆದರಿಕೆಯೊಡ್ಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ ನಿವಾಸಿ ಎನ್.ಪಿ. ನಿಂಗರಾಜು ಅವರನ್ನು ಆರೋಪಿ ಜೆ.ಕೆ. ತೇಜ್ ಕುಮಾರ್ ಅವರು ಹಲ್ಲೆ ನಡೆಸಿ ಕೊಲೆಯ ಬೆದರಿಕೆ ಹಾಕಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರುಗುಂದ ಗ್ರಾಮದ ನಿವಾಸಿ ನಿಂಗರಾಜು ಅವರು ಕೊಡ್ಲಿಪೇಟೆಯ ಪಿಎಸಿಎಸ್ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಅಕ್ಕಿ ವಿತರಣೆ ಮಾಡುತ್ತಿದ್ದಾಗ ಆರೋಪಿ ತೇಜ್‌ಕುಮಾರ್ ಸೊಸೈಟಿಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆಯ ಬೆದರಿಕೆ ಹಾಕಿದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ಪುಕಾರು ನೀಡಿ, ರಾತ್ರಿ ಬೈಕ್‌ನಲ್ಲಿ ಮನೆಯ ಕಡೆ ಹೋಗುತ್ತಿರುವಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.

ಮರುದಿನ ಅರಕಲಗೂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರಸಂತೆ ಪೊಲೀಸ್ ಠಾಣೆಗೆ ಬಂದು ನೀಡಿದ ಪುಕಾರಿನ ಮೇರೆ ಆರೋಪಿ ತೇಜ್‌ಕುಮಾರ್ ಮೇಲೆ ಪ್ರಕರಣ ದಾಖಲಾಗಿದೆ.