ಹೆಬ್ಬಾಲೆ, ಸೆ. ೧೫: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಕೆ.ಜೆ. ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷೆಯಾಗಿದ್ದ ಭಾಗೀರಥಿ ವಿರುದ್ಧ ೬ ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಪದಚ್ಯುತಿಗೊಳಿಸಿದ್ದರು. ಇದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ದಿನಾಂಕ ನಿಗದಿಪಡಿಸಿ ಉಪ ವಿಭಾಧಿಕಾರಿ ಯತೀಶ್ ಉಲ್ಲಾಳ್ ಆದೇಶಿಸಿದ್ದರು.ಈ ಹಿನ್ನೆಲೆಯಲ್ಲಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್ ನೇತೃತ್ವದಲ್ಲಿ ಶಿರಂಗಾಲ ಗ್ರಾ.ಪಂ. ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ಜೆ. ಗೀತಾ ಮಾತ್ರ ನಾಮಪತ್ರ ಸಲ್ಲಿಸಿದ್ದು, ನೂತನ ಅಧ್ಯಕ್ಷೆಯಾಗಿ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಅವರು ಘೋಷಣೆ ಮಾಡಿದರು. ೯ ಮಂದಿ ಸದಸ್ಯರ ಪೈಕಿ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ ಸದಸ್ಯರಾದ ಎಸ್.ಬಿ. ಶ್ರೀಕಾಂತ್, ಎಸ್.ಎ. ಪ್ರದೀಪ, ಲಕ್ಷಿö್ಮ, ಎಂ.ಆರ್. ಲತಾಬಾಯಿ, ಎಚ್.ಎಸ್. ಬಸವರಾಜು, ಸರಿತಾ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮಾಜಿ ಅಧ್ಯಕ್ಷೆ ಸದಸ್ಯೆ ಭಾಗೀರಥಿ ಮಾತ್ರ ಗೈರು ಹಾಜರಾಗಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಲೋಹಿತ್ ಹಾಗೂ ಚೇತನ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಆರ್. ಹೇಮಲತಾ, ಕಾರ್ಯದರ್ಶಿ ಕೆ.ಆರ್. ರವಿ ಹಾಗೂ ಸಿಬ್ಬಂದಿಗಳು ಇದ್ದರು. ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಭಾರತಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿದ್ದರು.