ಮಡಿಕೇರಿ, ಆ. ೪: ತಾಲೂಕಿನ ಅರುವತ್ತೊಕ್ಲು ಗ್ರಾಮದ ಬೇಕೋಟು ಮಕ್ಕ ಯೂತ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಅರುವತೊಕ್ಲು ಗ್ರಾಮದ ತಳೂರು ಎಂ. ಚಂಗಪ್ಪ ಹಾಗೂ ತಳೂರು ಎಂ. ಕುಶಾಲಪ್ಪ ಅವರ ಭತ್ತದ ಗದ್ದೆಯಲ್ಲಿ ಎರಡನೇ ವರ್ಷದ ಅದ್ದೂರಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟಕ್ಕೆ ಅಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಗ್ರಾಮದ ಹಿರಿಯರು ಹಾಗೂ ಗ್ರಾಮದ ಹಿತ ಚಿಂತಕರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಉದ್ಘಾಟನೆಯು ಕ್ಲಬ್‌ನ ಸದಸ್ಯ ಕ್ರೀಡಾಪಟುಗಳು ನಾಲ್ಕು ದಿಕ್ಕುಗಳಿಂದ ಕ್ರೀಡಾ ಜ್ಯೋತಿಯನ್ನು ಹೊತ್ತು ತರುವ ಮೂಲಕ, ನೆರೆದಿದ್ದ ಕ್ರೀಡಾಪಟುಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಕ್ರೀಡಾಕೂಟವನ್ನು ಪ್ರಾರಂಭಿಸಿದರು.

ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಯೋಮಾನದ ಆಧಾರದಲ್ಲಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ವಿವಿಧ ಸ್ಥಳಗಳಿಂದ ೧೬ ಪುರುಷರ ಕ್ರಿಕೆಟ್ ತಂಡಗಳು, ೧೨ ಪುರುಷರ ಹಗ್ಗಜಗ್ಗಾಟ ತಂಡಗಳು, ೮ ಮಹಿಳೆಯರ ಹಗ್ಗಜಗ್ಗಾಟ ತಂಡಗಳು ಹಾಗೂ ಎಲ್ಲಾ ವಯೋಮಾನದ ನೂರಾರು ಓಟಗಾರರು ಓಟಗಾರ್ತಿಯರು ಉತ್ಸಾಹದಿಂದ ಭಾಗವಹಿಸಿದರು.

ಗ್ರಾಮದ ಬೆಳೆಗಾರರು ಹಾಗೂ ಹಿತ ಚಿಂತಕರುಗಳಾದ ಚೆರುಮಾಡಂಡ ಸತೀಶ್ ಸೋಮಣ್ಣ ಬ್ಯಾಟಿಂಗ್ ಹಾಗೂ ಗ್ರಾಮದ ಮಾಜಿ ಸೈನಿಕ ತಳೂರು ಕೇಶವ ಅವರು ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಕ್ರೀಡಾಭಿಮಾನಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಂಗಳೂರಿನ ೯೩.೫ ಎಫ್‌ಎಂ. ರೇಡಿಯೋ ಜಾಕಿ ಆರ್.ಜೆ. ತ್ರಿಶೂಲ್, ಗ್ರಾಮದ ಅಧ್ಯಾಪಕಿ ತಳೂರು ಉಷಾ ಕಾಶಿ ಹಾಗೂ ಗ್ರಾಮದ ಶಿಕ್ಷಕಿ ತಳೂರು ಕುಸುಮ ದಿನೇಶ್ ಇವರುಗಳ ನಿರೂಪಣೆ ಹಾಗೂ ವೀಕ್ಷಕ ವಿವರಣೆ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಸೂರಿ ಕಾಕೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಆಗಮಿಸಿದ್ದರು. ವಿಶೇಷ ಅತಿಥಿಗಳಾಗಿ ಮಕ್ಕಳ ತಜ್ಞ ಹಾಗೂ ಸಾಹಿತಿ ಮೇ. ಡಾ. ಕುಶ್ವಂತ್ ಕೋಳಿಬೈಲು, ಬೆಟ್ಟಗೇರಿ ಪಂಚಾಯಿತಿ ಅಧ್ಯಕ್ಷ ನಾಪಂಡ ರಾಲಿ ಮಾದಯ್ಯ, ಬೆಟ್ಟಗೇರಿ ವಿ.ಎಸ್.ಎಸ್.ಎನ್.ನ ಅಧ್ಯಕ್ಷ ತಳೂರು ಎ. ಕಿಶೋರ್ ಕುಮಾರ್, ಬೆಟ್ಟಗೇರಿ ಗ್ರಾ.ಪಂ. ಸದಸ್ಯರಾದ ತಳೂರು ದಿನೇಶ್ ಕರುಂಬಯ್ಯ, ಬೆಟ್ಟಗೇರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ತಳೂರು ಶಾಂತಿ ಸೋಮಣ್ಣ, ಗ್ರಾಮದ ನಿವೃತ್ತ ಯೋಧ ಜಬ್ಬಂಡ ಕುಟ್ಟಪ್ಪ, ಸ್ಥಳ ದಾನಿಗಳಾದ ತಳೂರು ಎಂ. ಚಂಗಪ್ಪ, ತಳೂರು ಎಂ. ಕುಶಾಲಪ್ಪ ಆಗಮಿಸಿ ಕ್ರೀಡಾಕೂಟಕ್ಕೆ ಮೆರಗು ನೀಡಿದರು.