ಮಡಿಕೇರಿ, ಮಾ. ೨೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ಬೇಗೂರಿನ ಪೂಳೆಮಾಡ್ ಮಂದ್‌ನಲ್ಲಿ ‘ಮಂದ್ ತೊರ್‌ಪೊ ಕಾರ್ಯಕ್ರಮ’ ನಡೆಯಿತು. ಬೇಗೂರಿನ ನಾಡ್ ತಕ್ಕರಾದ ಬೈರಂಡ ಪೂಣಚ್ಚ ಅವರು ಮಂದ್ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೂಳೆಮಾಡ್ ಈಶ್ವರ ದೇವಸ್ಥಾನ ಅಧ್ಯಕ್ಷ ಬೊಳ್ಳಿಯಂಗಡ ದಾದು ಪೂವಯ್ಯ ಮಾತನಾಡಿ, ಪ್ರತಿ ನಾಡಿನಲ್ಲಿರುವ ಮಂದ್‌ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇಂದಿನ ಯುವ ಜನತೆ ನಮ್ಮ ಸಂಸ್ಕೃತಿ ಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಪೂಳೆಮಾಡ್ ಈಶ್ವರ ದೇವಸ್ಥಾನದ ದೇವಸ್ಥಾನ ಮುಖ್ಯಸ್ಥ ಮತ್ರಂಡ ಪೂಣಚ್ಚ ಇಂದಿಗೂ ಕೆಲವು ನಾಡಿನಲ್ಲಿ ಮಂದ್‌ಗಳು ಮುಚ್ಚಿಹೋಗಿರುತ್ತದೆ. ಮಂದ್‌ಗಳಲ್ಲಿ ನಾಡ್ ಮಂದ್ ಹಾಗೂ ಊರ್ ಮಂದ್ ಇರುತ್ತದೆ. ಊರಿನೊಳಗಡೆ ಕೇರಿಮಂದ್, ಅಂಬಲ ಹೀಗೆ ನಮ್ಮ ಸಂಸ್ಕೃತಿಯಲ್ಲಿ ಕಾಣಬಹುದು. ನಾವುಗಳು ಕೈಜೋಡಿಸಿದರೆ ಮಂದ್‌ಗಳು ಮುಂದೆ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಯೋಜನೆಯಲ್ಲಿ ಮುಚ್ಚಿಹೋಗಿರುವ ಮಂದ್‌ಗಳನ್ನು ತೆರೆದು ಕಾರ್ಯಕ್ರಮ ಗಳನ್ನು ರೂಪಿಸಿಕೊಂಡು ಬಂದಿರು ತ್ತೇವೆ. ಮಂದ್ ಮಾನಿಗಳು ಉಳಿದರೆ ನಮ್ಮ ಸಂಸ್ಕೃತಿ, ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸ ಬಹುದು ಎಂದರು.

ಪೂಳೆಮಾಡ್ ಈಶ್ವರ ದೇವಸ್ಥಾನದ ತಕ್ಕ ಚೇಂದೀರ ಮಧು ಕರುಂಬಯ್ಯ, ಪೂಳೆಮಾಡ್ ಈಶ್ವರ ದೇವಸ್ಥಾನದ ಭಂಡಾರ ತಕ್ಕ ಮಲ್ಲಂಡ ನಾಚಪ್ಪ, ಕೃಷಿಕ ಕಾರಪಂಡ ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದ್ದರು. ಪೂಮಾಲೆ ವಾರಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ‘ಕೊಡಗ್‌ರ ಮಂದ್ ಮಾನಿ’ ವಿಷಯದ ಕುರಿತಾಗಿ ವಿಚಾರಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಂದತವ್ವ ಕೊಡವ ಸಾಂಸ್ಕೃತಿಕ ಟ್ರಸ್ಟ್ ಇವರಿಂದ ಸ್ವಾಗತನೃತ್ಯ, ಗೆಜ್ಜೆತಂಡ್ ನೃತ್ಯ, ಚಿಣ್‌ಕ್‌ಮಳೆ ನೃತ್ಯ, ಬೇಗೂರು ತಂಡ ದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಉಮ್ಮತ್ತಾಟ್ ನೃತ್ಯ ಹಾಗೂ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕೊಡವ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆದವು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ.ಗಿರೀಶ್, ಅಕಾಡೆಮಿ ಸದಸ್ಯರಾದ ಪಡಿಞರಂಡ ಪ್ರಭುಕುಮಾರ್, ಮಾಚಿಮಾಡ ಜಾನಕಿ ಮಾಚಯ್ಯ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಭಾಗವಹಿಸಿದ್ದರು. ಪುತ್ತಾಮನೆ ಕುಶಿ ಕಾವೇರಮ್ಮ ಪ್ರಾರ್ಥಿಸಿದರು.