ಬೆಂಗಳೂರು, ಮಾ. ೨೨: ರಾಜ್ಯದಲ್ಲಿ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿ ಮಾನವ ಸಂಘರ್ಷ ಕುರಿತು ವಿಕಾಸಸೌಧದ ಸಭಾಂಗಣದಲ್ಲಿ ಅರಣ್ಯ, ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆಯಲ್ಲಿ ನಡೆದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಶಾಸಕರುಗಳು, ಹಿರಿಯ ಅರಣ್ಯ ಅಧಿಕಾರಿಗಳ, ಬೆಳೆಗಾರರ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಆನೆ ಮಾನವ ಸಂಘರ್ಷ ನಿಯಂತ್ರಣಕ್ಕೆ ಅವಶ್ಯವಾಗಿರುವ ಪರಿಹಾರಗಳ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿ ೨೦೧೭ರ ಗಣತಿಯಲ್ಲಿ ೬೦೪೯ ಆನೆಗಳಿದ್ದು, ಪ್ರಸ್ತುತ ಗಣತಿ ಕಾರ್ಯ ನಡೆಯುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಾರಿ ಬಜೆಟ್ನಲ್ಲಿ ಆನೆ ಮಾನವ ಸಂಘರ್ಷ ತಡೆಗೆ ರೂ. ೧೦೦ ಕೋಟಿ ಮೀಸಲಿರಿಸಿದ್ದು, ಇದನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಅರಣ್ಯ ಅಧಿಕಾರಿಗಳಿಗೆ
(ಮೊದಲ ಪುಟದಿಂದ) ಅರಣ್ಯ ಸಚಿವರು ಸೂಚಿಸಿದರು. ಕೊಡಗಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಮಿತಿಮೀರಿದ್ದು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಆನೆ ಕಂದಕ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ವಾರ್ಷಿಕವಾಗಿ ಸೂಕ್ತ ನಿರ್ವಹಣೆ ಮಾಡಿದಲ್ಲಿ ಮಾತ್ರ ಕಾಡಾನೆ ನಿಯಂತ್ರಣ ಸಾಧ್ಯ. ಸೋಲಾರ್ ಬೇಲಿ ಅಳವಡಿಕೆ ವಿಫಲವಾಗಿದೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಅರಣ್ಯದಲ್ಲಿ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ಆನೆಗಳಿಗೆ ಆಹಾರವಾಗುವ ಮರಗಳನ್ನು ಬೆಳೆಯಲು ಕ್ರಮವಹಿಸಬೇಕಲ್ಲದೇ ಕೃತಕ ಕೆರೆಗಳ ನಿರ್ಮಾಣವಾಗಬೇಕೆಂದರು. ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಮಾತನಾಡಿ, ಸಕಲೇಶಪುರ ತಾಲೂಕಿನ ಆರು ಗ್ರಾಮದಲ್ಲಿ ಕಾಡಾನೆ ಹಾಗೂ ವನ್ಯಜೀವಿ ಉಪಟಳದಿಂದ ೨೪೦೦ ಎಕರೆ ಕೃಷಿ ಜಮೀನನ್ನು ಸರ್ಕಾರಕ್ಕೆ ನೀಡಲು ಮುಂದೆ ಬಂದಿದ್ದು, ಇದಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಿದಲ್ಲಿ ಪುಷ್ಪಗಿರಿ- ಕುದುರೆಮುಖ ರಕ್ಷಿತ ಅರಣ್ಯ ಜೋಡಣೆ ಮಾಡಿದಂತಾಗುತ್ತದೆ. ಅಲ್ಲದೆ ಆನೆಕಾರಿಡಾರ್ ಯೋಜನೆ ಹಾಗೂ ಅರಣ್ಯವನ್ನು ವಿಸ್ತರಿಸಿದಂತಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರಲ್ಲದೆ, ೨೩೦ ಹಾಡಿಗಳಿದ್ದು ಹಾಡಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಅವಕಾಶ ಕಲ್ಪಿಸಬೇಕೆಂದರು.
ಕೊಡಗಿನಲ್ಲಿ ಈ ಬಗ್ಗೆ ಅರಣ್ಯ ಸಚಿವರು ಸಭೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅರಣ್ಯ ಸಚಿವರನ್ನು ಆಗ್ರಹಿಸಿದರು. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಅಧಿವೇಶನ ಮುಗಿದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಅರಣ್ಯ ಸಚಿವರು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಎ.ಟಿ ರಾಮಸ್ವಾಮಿ, ಎಂ.ಇ. ಕುಮಾರಸ್ವಾಮಿ, ಹೆಚ್.ಕೆ. ಕುಮಾರ ಸ್ವಾಮಿ, ವಿಧಾನ ಪರಿಷತ್ತು ಸದಸ್ಯರಾದ ಸುಜಾ ಕುಶಾಲಪ್ಪ, ಪ್ರಾಣೇಶ್, ಸರಕಾರದ ಅಪಾರ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ವನ್ಯಜೀವಿ ಪರಿಪಾಲಕರಾದ ವಿಜಯಕುಮಾರ್ ಗೋಗಿ ಸೇರಿದಂತೆ ರಾಜ್ಯ ಹಿರಿಯ ಅರಣ್ಯ ಅಧಿಕಾರಿಗಳು ಕೊಡಗಿನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಶಂಕರ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪೂವಯ್ಯ, ವನ್ಯಜೀವಿ ವಿಭಾಗದ ಶಿವರಾಂ ಬಾಬು, ನಾಗರಹೊಳೆಯ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಕೊಡಗು, ಹಾಸನ, ಚಿಕ್ಕ ಮಗಳೂರಿನ ಬೆಳೆಗಾರ ಸಂಘದ ಪ್ರಮುಖರು ಹಾಜರಿದ್ದರು.
 
						