ಮಡಿಕೇರಿ, ಫೆ.೧೭: ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯಿಂದ ಇಬ್ಬರು ಬಾಲ ವಿಜ್ಞಾನಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಶಾಲನಗರ ಫಾತಿಮ ಆಂಗ್ಲ ಮಾಧ್ಯಮ ಕಾನ್ವೆಂಟ್ನ ವಿದ್ಯಾರ್ಥಿನಿ ಕೆ. ಗಾಯತ್ರಿ ಪ್ರಥಮ ಸ್ಥಾನ ಹಾಗೂ ಮದೆ ಮಹೇಶ್ವರ ಪಿಯು ಕಾಲೇಜಿನ ಕೆ.ಕುಶನ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡ ಬಾಲ ವಿಜ್ಞಾನಿಗಳಿಗೆ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಥಮ ರೂ.೫ ಸಾವಿರ ಹಾಗೂ ದ್ವಿತೀಯ ರೂ.೩ ಸಾವಿರಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸ ಲಾಯಿತು.
ಜಿಲ್ಲಾ ಮಟ್ಟ ದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳುವ ಮೊದಲ ೪ ಯುವ ವಿಜ್ಞಾನಿಗಳಿಗೆ ತಲಾ ರೂ.೧೦ ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ತಿಳಿಸಿದರು.
ಬಾಲ ವಿಜ್ಞಾನಿಗಳಾಗಿ ಆಯ್ಕೆಗೊಂಡ ಕುಶಾಲನಗರ ಫಾತಿಮ ಕಾನ್ವೆಂಟ್ನ ವಿದ್ಯಾರ್ಥಿನಿ ಕೆ.ಗಾಯತ್ರಿ ಸೋಲಾರ್ ಶಕ್ತಿಯಿಂದ ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ ಮಾಡುವ ಯಂತ್ರದ ಉಪಯೋಗ ಕುರಿತು ಹಾಗೂ ಮದೆ ಮಹೇಶ್ವರ ಪಿಯು ಕಾಲೇಜಿನ ಕೆ.ಕುಶನ್ ಜೈವಿಕ ವೈವಿಧ್ಯತೆ ಎಂಬ ವಿಷಯದ ಕುರಿತು ವೈಜ್ಞಾನಿಕ ಯೋಜನೆ ಮಂಡಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕುಶಾಲನಗರ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್ ವಿದ್ಯಾರ್ಥಿಗಳಿಗೆ ಉತ್ತಮ ಯೋಜನೆ ತಯಾರಿಸುವ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ ಇದ್ದರು.