ಮುಳ್ಳೂರು, ಜ. ೨೯: ಜ. ೨೬ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಹೇಳಿ ಭಾವಚಿತ್ರವನ್ನು ತೆಗೆಸಿದರೆನ್ನಲಾದ ಪ್ರಕರಣವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಒಕ್ಕೂಟ, ವಿವಿಧ ದಸಂಸ ಸಂಘಟನೆಗಳ ಪ್ರಮುಖರು ಶನಿವಾರ ದುಂಡಳ್ಳಿ ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾ.ಪಂ.ಹಿರಿಯ ಸದಸ್ಯ ಡಿ.ಬಿ.ಬೋಜಪ್ಪ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಎಂ.ಎಸ್.ವೀರೇAದ್ರ, ದಸಂಸ ಪ್ರಮುಖರಾದ ಶಿವಲಿಂಗ, ಮೋಹನ್, ರಾಜಪ್ಪ, ಮಂಜಪ್ಪ, ಉಮೇಶ್, ಮಂಜುನಾಥ್, ಚಿನ್ನಪ್ಪ ಗ್ರಾ.ಪಂ.ಸದಸ್ಯರಾದ ದೇವರಾಜು, ಕಾಂತರಾಜು, ಮಾಜಿ ಸದಸ್ಯ ಸುಬ್ರಮಣಿ, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಮುಂತಾದವರು ಇದ್ದರು.

ಕೊಡ್ಲಿಪೇಟೆಯಲ್ಲಿ

ಇದೇ ವಿಚಾರದಲ್ಲಿ ಕೊಡ್ಲಿಪೇಟೆಯಲ್ಲಿ ದಸಂಸ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಹೊರಟು ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ದಸಂಸ ತಾಲೂಕು ಘಟಕದ ಅಧ್ಯಕ್ಷ ಜನಾರ್ಧನ್, ಹೋಬಳಿ ಘಟಕದ ಅಧ್ಯಕ್ಷ ವಸಂತ್ ಹಾಗೂ ಕಾರ್ಯಕರ್ತ ಜಯರಾಜ್ ಮತ್ತಿರರು ಪಾಲ್ಗೊಂಡಿದ್ದರು. ನಂತರ ಪ್ರತಿಭಟನಾಕಾರರು ಮನವಿ ಪತ್ರವನ್ನು ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕ ಮನು ಅವರ ಮೂಲಕ ಸರ್ಕಾರಕ್ಕೆ, ರಾಜ್ಯಪಾಲರಿಗೆ ಸಲ್ಲಿಸಿದರು.