ಕೂಡಿಗೆ, ಜ. ೨೯: ಜಿಲ್ಲಾ ವಾಲ್ಮೀಕಿ ನಿಗಮದ ವತಿಯಿಂದ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಮೂಲಕ ತಾಲೂಕಿನ ೨೫ ಗಿರಿಜನ ಫಲಾನುಭವಿ ಕುಟುಂಬಗಳಿಗೆ ತಲಾ ೪ ಬನ್ನೂರು ತಳಿ ಕುರಿಗಳನ್ನು ವಿತರಣೆ ಮಾಡಲಾಯಿತು.

ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನಿರ್ದೇಶನದಂತೆ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರ ಅಧ್ಯಕ್ಷತೆಯಲ್ಲಿ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕುರಿಗಳನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಕೆ.ಚಂದ್ರ, ತಾಲೂಕಿನ ಗಿರಿಜನರ ಅಭಿವೃದ್ದಿಗೆ ಸರಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಗಿರಿಜನರು ಕೂಡ ತಮಗೆ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದರು.

ಜಿಲ್ಲೆಯ ಐಟಿಡಿಪಿ ಅಧಿಕಾರಿಗಳು ಗಿರಿಜನರಿಗೆ ಒದಗಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಸೌಲಭ್ಯ ಕೋರಿ ನಿರಂತರವಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಕೂಡ ಕಳೆದ ೧೦ ವರ್ಷಗಳಿಂದ ಗಿರಿಜನರಿಗೆ ನೀಡಬೇಕಾದ ಹಸು, ಹಂದಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ. ಹಾಡಿಗಳ ಪರಿಶೀಲನೆ ಕಾರ್ಯ ಕೂಡ ನಡೆಸುತ್ತಿಲ್ಲ. ಶಾಸಕರ ಸೂಚನೆಯನ್ನು ಕೂಡ ಪರಿಗಣಿಸದೆ ಕೇವಲ ಅಭಿವೃದ್ದಿ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಸೌಲಭ್ಯಗಳನ್ನು ಒದಗಿಸದ ಅಧಿಕಾರಿಗಳನ್ನು ಕೂಡಲೆ ಜಿಲ್ಲೆಯಿಂದ ವರ್ಗಾಯಿಸಬೇಕೆಂದು ಅವರು ಒತ್ತಾಯಿಸಿದರು.

ಕುರಿ ವಿತರಣೆ ಸಂದರ್ಭ ಲ್ಯಾಂಪ್ಸ್ ಉಪಾಧ್ಯಕ್ಷ ಬಿ.ಎನ್.ಮನು, ನಿರ್ದೇಶಕ ಸುರೇಶ್, ಅಣ್ಣಯ್ಯ, ನಿಗಮದ ಅಧಿಕಾರಿ ನೀತು ಕಾವೇರಪ್ಪ ಮತ್ತು ಸಿಬ್ಬಂದಿಗಳು ಇದ್ದರು.