ಮಡಿಕೇರಿ, ಜ. ೨೯: ಗಣಪತಿ ಬೀದಿ ರಸ್ತೆ ಕಾಮಗಾರಿ ಮಂದಗತಿ ಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಇಲ್ಲಿನ ನಿವಾಸಿಗಳು ಧೂಳಿನ ನಡುವೆ ಪರದಾಡುವಂತಾಗಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನೆ ನಡೆಯಿತು. ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳು ಹಾಗೂ ಸ್ಥಳೀಯರು ಗಣಪತಿ ಬೀದಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ

(ಮೊದಲ ಪುಟದಿಂದ) ನಗರಸಭೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ನಗರಸಭಾ ಆಯುಕ್ತರು ಬಾರದೆ ಪರಿಸರ ಅಭಿಯಂತರರು ಹಾಗೂ ಆರೋಗ್ಯ ಪರಿವೀಕ್ಷಕರನ್ನು ಕಳುಹಿಸಿದ ಕಾರಣ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಗರಸಭೆಗೆ ತೆರಳಿ ಅಹೋರಾತ್ರಿ ಧರಣಿಗೆ ಮುಂದಾದರು. ಈ ವೇಳೆ ನಗರಸಭಾ ಆಯುಕ್ತ ರಾಮದಾಸ್ ಅವರು ಆಗಮಿಸಿದಾಗ ಪ್ರತಿಭಟನಾಕಾರರು ಹಾಗೂ ಆಯುಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಆಯುಕ್ತರು ಗಣಪತಿ ಬೀದಿ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳಾದ ಅಮಿನ್ ಮೊಯ್ಸಿನ್, ಮನ್ಸೂರ್, ಬಷೀರ್, ನೀಮಾ ಅರ್ಷದ್, ಮೇರಿ ವೇಗಸ್, ಮತ್ತಿತರರಿದ್ದರು.

ಅಧ್ಯಕ್ಷರ ಪ್ರತಿಕ್ರಿಯೆ

ಗಣಪತಿ ಬೀದಿ ರಸ್ತೆ ಕಾಮಗಾರಿ ಸಂಬAಧ ನಡೆದ ಪ್ರತಿಭಟನೆ ಕುರಿತಂತೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಚರಂಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.