ಪಾಲಿಬೆಟ್ಟ ಜ.೨೯: ಮನೆಯ ಸುತ್ತ ಕಂದಕ ಕೊರೆದು ಕಾರ್ಮಿಕನ ಮೇಲೆ ದೌರ್ಜನ್ಯವೆಸಗಿದ ಘಟನೆ ಸಂಬAಧ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸುಬ್ರಮಣ್ಯ ಹಾಗೂ ವೀರಾಜಪೇಟೆ ತಾಲೂಕು ದಂಡಾಧಿಕಾರಿ ಯೋಗಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಶನಿವಾರ ಮಸ್ಕಲ್ ಕಾಫಿ ತೋಟದ ಕಾರ್ಮಿಕ ಸುಬ್ರಮಣಿ ಮನೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಂಡದಲ್ಲದೇ ಮೂರು ದಿನಗಳ ಒಳಗಾಗಿ ಕಂದಕವನ್ನು ಮುಚ್ಚಿ, ಮೂಲ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್ನ್ನು ಒದಗಿಸಿಕೊಡಬೇಕೆಂದು ಮಾಲೀಕ ಹಾಗೂ ವ್ಯವಸ್ಥಾಪಕರಿಗೆ ಸೂಚಿಸಿದರು.
ಮನೆಯ ಸುತ್ತ ಕಂದಕ ಕೊರೆದು ಅಮಾನವೀಯತೆ ಮೆರೆದ ಮಾಲೀಕ ಹಾಗೂ ವ್ಯವಸ್ಥಾಪಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಮಾಲೀಕ ಹಾಗೂ ವ್ಯವಸ್ಥಾಪಕನ ವಿರುದ್ಧ ಕಾರ್ಮಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.
ಪದೇ ಪದೇ ಕಾರ್ಮಿಕನ ಮೇಲೆ ದೌರ್ಜನ್ಯ ನಡೆಸಲು ಮುಂದಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಮುಂದೆ ಯಾವುದೇ ರೀತಿಯಲ್ಲಿಯೂ ಕಾರ್ಮಿಕ ಮತ್ತು ಕುಟುಂಬದ ಮೇಲೆ ದೌರ್ಜನ್ಯ ನಡೆಸದೇ ನ್ಯಾಯಾಲಯದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮಾಲೀಕ ಮತ್ತು ವ್ಯವಸ್ಥಾಪಕರಿಗೆ ಸೂಚಿಸಿದರು.
ಮಾಲೀಕ ಹಾಗೂ ವ್ಯವಸ್ಥಾಪಕರು, ಇನ್ನಿತರ ಸಿಬ್ಬಂದಿಗಳು ಸುಬ್ರಮಣಿ ಕುಟುಂಬಕ್ಕೆ ವಿನಾಕಾರಣ ತೊಂದರೆ ಕೊಡಲು ಪ್ರಯತ್ನಿಸಿದರೆ, ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಥವಾ ನೇರವಾಗಿ ನ್ಯಾಯಾಲಯದ ಗಮನಕ್ಕೆ ತರುವಂತೆ ತಿಳಿಸಿದ ನ್ಯಾಯಾಧೀಶರು ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು. ಈ ಸಂದರ್ಭ ವೃತ್ತನಿರೀಕ್ಷಕ ವೆಂಕಟೇಶ್, ಉಪನಿರೀಕ್ಷಕ ಮೋಹನ್ರಾಜ್ ಹಾಜರಿದ್ದರು.
-ಪುತ್ತಂ ಪ್ರದೀಪ್