ಸಿದ್ದಾಪುರ, ಜ.೨೯: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರಿಗೆ ಜಿಲ್ಲಾಡಳಿತ ಮನೆ ನಿರ್ಮಾಣ ಮಾಡುವಂತೆ ನೋಟೀಸ್ ಜಾರಿ ಮಾಡಿರುವುದಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್ ಮಾತನಾಡಿ, ೨೦೧೯ ರ ಕಾವೇರಿ ನದಿ ಪ್ರವಾಹದಲ್ಲಿ ನೆಲ್ಲಿಹುದಿಕೇರಿ ವ್ಯಾಪ್ತಿಯ ನೂರಾರು ಮನೆಗಳು ನೆಲಸಮವಾಗಿತ್ತು. ಸಂತ್ರಸ್ತರಿಗೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಅಭ್ಯತ್ ಮಂಗಲ ಗ್ರಾಮದ ಒತ್ತುವರಿ ತೆರವುಗೊಳಿಸಿ ಸಂತ್ರಸ್ತರಿಗೆ ನಿವೇಶನ ಗುರುತಿಸಿತು. ಆದರೆ ಗುರುತಿಸಲಾಗಿರುವ ಜಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನು ನೀಡದೆ ಹಾಗೂ ದಾಖಲೆಗಳನ್ನು ವರ್ಗಾಯಿಸದೇ ಏಕಾಏಕಿ ಜಿಲ್ಲಾಡಳಿತ ಇದೀಗ ೧೦ ದಿನಗಳ ಒಳಗಾಗಿ ಮನೆ ನಿರ್ಮಾಣ ಮಾಡಬೇಕೆಂದು ನೋಟೀಸ್ ಜಾರಿಮಾಡಿರುವುದು ಹಾಸ್ಯಾಸ್ಪದ ಎಂದರು. ಜಿಲ್ಲಾಡಳಿತ ನೀಡಿರುವ ನೋಟೀಸ್‌ನಿಂದಾಗಿ ಸಂತ್ರಸ್ತರು ಗೊಂದಲಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ಸರಿಯಾದ ದಾಖಲೆ ಒದಗಿಸಲು ಗ್ರಾ.ಪಂ ವತಿಯಿಂದ ವಿವಿಧ ಕಚೇರಿಗೆ ಅಲೆದಾಡಿದರೂ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಗ್ರಾ.ಪಂ ಸದಸ್ಯ ಎ.ಕೆ ಹಕೀಂ ಮಾತನಾಡಿ, ಸಂತ್ರಸ್ತರಿಗೆ ಈವರೆಗೂ ಸರಕಾರದ ಕಡೆಯಿಂದ ನಿವೇಶನ ಹಾಗೂ ಸೂರು ಸಿಕ್ಕಿಲ್ಲ. ಸಾಮಾಜಿಕ ಕಳಕಳಿಯಿಂದ ಕೆಲ ಟ್ರಸ್ಟ್ಗಳ ಹಾಗೂ ಸಂಘಟನೆಗಳು ಕೆಲ ಸಂತ್ರಸ್ತರಿಗೆ ಸೂರು ಒದಗಿಸಿವೆ. ಇನ್ನೂ ಕೆಲ ಸಂತ್ರಸ್ತರಿಗೆ ನಿವೇಶನ ನೀಡಿದ್ದು, ಆ ಜಾಗದ ದಾಖಲೆಗಳನ್ನು ಸಂತ್ರಸ್ತರ ಹೆಸರಿಗೆ ವರ್ಗಾಯಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಘಟನೆಗಳು ಸಂತ್ರಸ್ತರಿಗೆ ನೀಡಿದ ಜಾಗದಲ್ಲಿ ಮನೆ ನಿರ್ಮಿಸಲು ಜಿ.ಪಿ.ಎಸ್ ಮಾಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಡ ಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಮನವಿ ಮಾಡಲಾಗುವುದು. ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಸಂತ್ರಸ್ತರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರಾದ ಸಫಿಯಾ, ಸಂಶೀರ್, ಸುಜಾತ, ಮುಸ್ತಫ, ಸುಹದಾ, ಪ್ರಮೀಳ, ಸಿಂಧು, ಅಫ್ಸಲ್, ಅಶೋಕ್ ಇದ್ದರು.