ಮಡಿಕೇರಿ, ಜ.18: ರಾಷ್ಟ್ರದ ಸಂಸ್ಕøತಿಯನ್ನು ಪ್ರಪಂಚಕ್ಕೆ ವಿಸ್ತರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಯುವ ಒಕ್ಕೂಟ, ನೇತಾಜಿ ಗೆಳೆಯರ ಬಳಗ ಮತ್ತು ಸಂಪಾಜೆ ಚಡಾವು ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಪ್ತಾಹ ಅಂಗವಾಗಿ ಕಾನೂನು ಅರಿವು ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಜನರಲ್ಲಿ ದೇಶ ಕಟ್ಟುವ ಶಕ್ತಿ ಇದೆ. ಆದ್ದರಿಂದ ಯುವಜನರು ಸಂಘಟಿತರಾಗಬೇಕು. ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬಡವರು, ಶೋಷಣೆಗೆ ತುತ್ತಾದವರಿಗೆ ನ್ಯಾಯ ಒದಗಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಬಡ ಜನರಿಗೆ, ದುರ್ಬಲರಿಗೆ ವಂಚಿತರಾದವರಿಗೆ ನ್ಯಾಯ ಕಲ್ಪಿಸುವುದು, ಉಚಿತ ಕಾನೂನು ಅರಿವು ನೆರವು ಮೂಡಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅರ್ಹರು ಪಡೆದುಕೊಳ್ಳುವಂತಾಗಬೇಕು ಎಂದರು.
ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವುದು, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರವು ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು. ಪೋಕ್ಸೋ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನೈಜ ಘಟನೆಗಳಿಗೆ ಒತ್ತು ನೀಡಬೇಕಿದೆ ಎಂದರು. ಕಾನೂನು ಸಂಘರ್ಷಕ್ಕೆ ತುತ್ತಾಗದೆ, ಕಾನೂನಿನ ಅರಿವು ನೆರವು ಪಡೆಯಬೇಕು ಎಂದರು.
‘ರಾಷ್ಟ್ರದ ಸಂವಿಧಾನದ ಮೂಲಭೂತ ಕಾನೂನುಗಳು ಹಾಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಇದ್ದಾಗ ಉತ್ತಮ ಜೀವನ ಕಟ್ಟಿಕೊಳ್ಳಬಹುದು. ದೌರ್ಜನ್ಯ, ದಬ್ಬಾಳಿಕೆಯಿಂದ ದೂರವಿರಬಹುದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಅವರು ಮಾತನಾಡಿ ಯುವ ಜನರೇ ಭಾರತದ ಆಸ್ತಿಯಾಗಿದ್ದು, ಯುವ ಜನರಿಂದಲೇ ಸದೃಡ ಭಾರತ ನಿರ್ಮಾಣ ಸಾಧ್ಯ ಎಂಬುದು ವಿವೇಕಾನಂದರ ಅಗಮ್ಯ ನಂಬಿಕೆಯಾಗಿತ್ತು ಎಂದು ಹೇಳಿದರು.
ಯುವಕರಿಗೆ ಆಂತರಿಕ ಶಕ್ತಿ, ಸ್ಪೂರ್ತಿ ತುಂಬಿ ದೇಶದ ಪ್ರಬುದ್ದತೆಗೆ ದುಡಿಯುವಂತೆ ಮಾಡಿದ್ದು ಸ್ವಾಮಿ ವಿವೇಕಾನಂದರು ಎಂದರು. ವಿವೇಕಾನಂದರ ಘೋಷವಾಕ್ಯಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು ಹಾಗೂ ಅದನ್ನು ಕರ್ತವ್ಯ ರೂಪದಲ್ಲಿ ಪ್ರದರ್ಶಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಿ.ಜೆ. ಜವರಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ ಪಿ ಇತರರು ಇದ್ದರು. ಸಂತೋಷ್ ನಿರೂಪಿಸಿದರು, ಅರ್ಚನಾ ಪ್ರಾರ್ಥಿಸಿದರು, ಪಿ.ಸುಕುಮಾರ್ ಸ್ವಾಗತಿಸಿದರು ಮತ್ತು ಕನ್ನಿಕಾ ವಂದಿಸಿದರು.