ಮಡಿಕೇರಿ, ಜ. ೧೯: ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಪತ್ತೆಗಾಗಿ ಕಳೆದ ವಾರದಿಂದ ಸಮೀಕ್ಷಾ ಕಾರ್ಯ ತೀವ್ರವಾಗಿ ನಡೆಯುತ್ತಿದೆ.

ಆನೆಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯಾದ್ಯಂತ ನಡೆಯುತ್ತಿರುವ ಈ ಸಮೀಕ್ಷೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು, ಮಡಿಕೇರಿ ನಗರ ಆರೋಗ್ಯ ಕೇಂದ್ರ, ಸಂಪಾಜೆ ಮತ್ತು ಸಂಪಾಜೆ ವ್ಯಾಪ್ತಿಯ ಪೆರಾಜೆ ಸೇರಿದಂತೆ ೪ ಪ್ರದೇಶಗಳಲ್ಲಿ ಆನೆಕಾಲು ರೋಗದ ಪತ್ತೆಗಾಗಿ ರಾತ್ರಿ ರಕ್ತಲೇಪನ ಸಂಗ್ರಹ ಮಾಡಿ ಆನೆಕಾಲು ರೋಗದ ಸರ್ವೇಕ್ಷಣಾ ಕಾರ್ಯ ಒಂದು ವಾರದಿಂದ ರಾತ್ರಿ ವೇಳೆ ನಡೆಯುತ್ತಿದೆ.

ಜಿಲ್ಲಾ ಸರ್ವೇಕ್ಷಣಾ ಘಟಕದ ಎಂಟೂಮಾಲಜಿಸ್ಟ್ ಮಂಜುನಾಥ್ ಅವರು ಮಾಹಿತಿ ನೀಡಿ ಕೊಡಗು ಜಿಲ್ಲೆಯಲ್ಲಿ ಆನೆಕಾಲು ರೋಗ ಪ್ರಕರಣಗಳು ಎಲ್ಲಾ ವಲಸೆಗಾರರಿಂದ ಬರುವ ಭೀತಿಯಿದ್ದು ಆರಂಭಿಕ ಹಂತದಲ್ಲಿ ತಡೆಯಲು ರಾತ್ರಿ ಸಮಯದಲ್ಲಿ ರಕ್ತ ಲೇಪನ ತೆಗೆದು ಪತ್ತೆ ಮಾಡುವ ಈ ಕಾರ್ಯದಲ್ಲಿ ಸರ್ಕಾರ ಮತ್ತು ಇಲಾಖೆ ಮಾರ್ಗಸೂಚಿಯಂತೆ ಆನೆಕಾಲು ರೋಗ ಮುಕ್ತವನ್ನಾಗಿಸುವ ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯೊಂದಿಗೆ ಗ್ರಾಮ ಪಂಚಾಯತಿ ಕೈಜೋಡಿಸಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಆರೋಗ್ಯ ನಿರೀಕ್ಷಣಾ ಅಧಿಕಾರಿ ಜಿ.ವಿ. ಶ್ರೀನಾಥ್, ತಾಲೂಕು ನೋಡೆಲ್ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮುತ್ತು, ಲೋಕೇಶ್, ಮೂರ್ನಾಡು ಗ್ರಾ.ಪಂ. ಅಧ್ಯಕ್ಷರು ಹಾಗೂ ವೈದ್ಯಾಧಿಕಾರಿಗಳಾದ ಡಾ. ವಿಜಯ್ ಕುಮಾರ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶುಕ್ರೂತ ದೊರೆಸ್ವಾಮಿ ಮತ್ತು ಸಂಪಾಜೆ ಗ್ರಾ.ಪಂ. ಅಧ್ಯಕ್ಷರು ಮತ್ತು ಆಡಳಿತ ಅಧಿಕಾರಿ ಮಲ್ಲಿಕಾರ್ಜುನ, ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡು ಸ್ಥಳೀಯ ಗ್ರಾಮ ಪಂಚಾಯಿತಿಯವರ ಸಹಕಾರ ಪಡೆದು ತಾಲೂಕಿನ ೪ ನಿಗದಿತ ಪ್ರದೇಶಗಳಿಂದ ತಲಾ ೫೦೦ ರಂತೆ ೨ ಸಾವಿರ ಜನರಿಂದ ರಾತ್ರಿ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗ ಶಾಲೆಗೆ ಪರೀಕ್ಷೆಗಾಗಿ ಕಳಿಸಲಾಗಿದೆ.

ಸ್ಥಳೀಯ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ಸಹಯೋಗದೊಂದಿಗೆ ತಂಡಗಳು ರಚಿಸಿಕೊಂಡು ರಕ್ತ ಲೇಪನ ಸಂಗ್ರಹಿಸಿ ಪೈಲೇರಿಯ ಕುರಿತು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಯಿತು.