ಚೆಯ್ಯಂಡಾಣೆ, ಜ. ೧೩: ನಾಪೋಕ್ಲುವಿನ ರಾಫೆಲ್ಸ್ ಇಂಟರ್ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಮೂರ್ನಾಡು ಹಾಗೂ ನಾಪೋಕ್ಲು ವಿಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಹಾಗೂ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿ ಗಳಿಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಪಠ್ಯೇತರ ಚಟುವಟಿಕೆಗಳು ನಡೆಯದೆ ಅವರಲ್ಲಿ ಯಾವುದಕ್ಕೂ ಆಸಕ್ತಿ ಇಲ್ಲದಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮ ಗಳು ವಿದ್ಯಾರ್ಥಿಗಳಿಗೆ ಹುಮ್ಮಸ್ಸನ್ನು ನೀಡಲಿದ್ದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯಾಗಲಿ ಎಂದರು.
ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಯನ್ನು ಓದುವುದರ ಮೂಲಕ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮೆಹಬೂಬ್ ಸಾಬ್ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಕಾಲೇಜಿನ ವತಿಯಿಂದ ಹಲವಾರು ಕಾರ್ಯಕ್ರಮವನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಬಳಕೆಯನ್ನು ಹೋಗಲಾಡಿಸಿ ಅವರಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಿಸಲು ಇನ್ನು ಮುಂದೆ ಕೂಡ ಇಂತಹ ಹಲವಾರು ಸ್ಪರ್ಧೆಗಳನ್ನು ಆಯೋಜಿಸ ಲಾಗುವುದು ಎಂದರು.
ರಸಪ್ರಶ್ನೆ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ತನ್ವೀರ್ ನಡೆಸಿಕೊಟ್ಟರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ರಾಮ ಟ್ರಸ್ಟ್ ಪ್ರೌಢಶಾಲೆಯ ಆರ್ಯನ್ ಅಯ್ಯಪ್ಪ ಹಾಗೂ ಇಶಾನ್ ಮುತ್ತಣ್ಣ, ದ್ವಿತೀಯ ಸ್ಥಾನವನ್ನು ಜ್ಞಾನ ಜ್ಯೋತಿ ಪ್ರೌಢಶಾಲೆಯ ತನ್ವಿ ತಂಗಮ್ಮ ಹಾಗೂ ರೋಹಿತ್, ತೃತೀಯ ಸ್ಥಾನವನ್ನು ಮಾರುತಿ ಪ್ರೌಢಶಾಲೆಯ ಚೇತನ್ ಗೌಡ ಹಾಗೂ ಪ್ರಕೃತಿ ಗಳಿಸಿದರು. ವಿಜ್ಞಾನ ಮಾದರಿಯ ತಯಾರಿಕಾ ಸ್ಪರ್ಧೆಯಲ್ಲಿ ಶ್ರೀ ರಾಮ ಟ್ರಸ್ಟ್ ಪ್ರೌಢಶಾಲೆಯ ಅಜಯ್ ಹಾಗೂ ಯಶಂತ್ ಪ್ರಥಮ ಸ್ಥಾನವನ್ನು, ಪೊನ್ನಣ್ಣ ಹಾಗೂ ಸೈಯದ್ ಅಲಿ ದ್ವಿತೀಯ ಸ್ಥಾನವನ್ನು, ಜ್ಞಾನಜ್ಯೋತಿ ಪ್ರೌಢಶಾಲೆಯ ರೋಹನ್ ಹಾಗೂ ಅಶೀನ್ ಅಂಟನಿ ತೃತೀಯ ಸ್ಥಾನವನ್ನು ಗಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ರೇಖಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.