ಮಡಿಕೇರಿ, ಜ. ೧೩: ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ. ೧೫ ರಂದು ಭಾಗಮಂಡಲದಲ್ಲಿ ನಡೆಸಲುದ್ದೇಶಿಸಿದ್ದ ಚಂಡಿಕಾ ಯಾಗವನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಕ್ತರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಮೂಲಕ ೨೦೧೪ನೇ ಇಸವಿಯಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಟ್ರಸ್ಟ್ನ ಜಾಗದಲ್ಲಿ ಜನಾಂಗದ ಒಳಿತು ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದ ಶತರುದ್ರಾಭಿಶೇಕ, ಪಠಣ, ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಚಂಡಿಕಾ ಯಾಗವನ್ನು ಈ ಬಾರಿ ತಾ. ೧೫ ರಂದು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೋವಿಡ್-೧೯ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಪೂಜಾ ಕಾರ್ಯಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆ ಚಂಡಿಕಾಯಾಗ ಸೇರಿದಂತೆ ಎಲ್ಲಾ ಪೂಜಾ ಕೈಂಕರ್ಯಗಳನ್ನು ಮುಂದೂಡ ಲಾಗಿದೆ. ಪರಿಸ್ಥಿತಿ ಸರಿಯಾದ ನಂತರ ಸರಕಾರದ ನಿಯಮಗಳು ಸಡಿಲಗೊಂಡರೆ ಯಾಗ ನಡೆಸುವ ಮುಂದಿನ ದಿನಾಂಕವನ್ನು ನಿರ್ಧರಿಸಿ ಭಕ್ತರಿಗೆ ತಿಳಿಸಲಾಗುವುದು ಎಂದು ದೇವಯ್ಯ ಹೇಳಿದ್ದಾರೆ.