ಪ್ರತಿಪಕ್ಷಗಳ ವಿರೋಧದ ನಡುವೆ ಮತಾಂತರ ನಿಷೇಧ ಮಸೂದೆ ಮಂಡನೆ
ಬೆಳಗಾವಿ, ಡಿ. ೨೧: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ರಾಜ್ಯ ಸರ್ಕಾರ ಮಂಗಳವಾರ ತರಾತುರಿಯಲ್ಲಿ ವಿಧಾನಸಭೆಯಲ್ಲಿ ಮಂಡಿಸಿದೆ. ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾಗುತ್ತಿದ್ದAತೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ತಮಗೆ ಮತಾಂತರ ನಿಷೇಧ ವಿಧೇಯಕದ ಪ್ರತಿ ಕೊಟ್ಟಿಲ್ಲ ಮತ್ತು ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂಥ ವಿಧೇಯಕಗಳನ್ನು ಕದ್ದುಮುಚ್ಚಿ ಏಕೆ ಮಂಡಿಸುತ್ತೀರಿ? ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇದು ತಾರತಮ್ಯ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಧಿವೇಶನದ ದ್ವಿತೀಯಾರ್ಧಕ್ಕೆ ವಿಧಾನಸಭೆಯ ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವ ಮುನ್ನವೇ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ನೀಡಿರುವುದು ಸರಿಯಲ್ಲ. ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವವರೆಗೆ ಸ್ಪೀಕರ್ ಏಕೆ ಕಾಯಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ -೨೦೨೧ನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ, ಚರ್ಚೆ ಮಾಡೋಣ. ನಾವು ಈಗಾಗಲೇ ಈ ಬಗ್ಗೆ ಹೇಳಿದ್ದೆವು ಎಂದು ಬಿಎಸ್ ವೈ ತಿಳಿಸಿದರು. ಕದ್ದುಮುಚ್ಚಿ ಮಸೂದೆಯನ್ನು ಪ್ರಸ್ತಾಪ ಮಾಡೋದೇಕೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆಮಾಡಿದರು. ಈ ವೇಳೆ ಸಿಟ್ಟಾದ ಸಭಾಧ್ಯಕ್ಷರು, ಕದ್ದು ಮುಚ್ಚಿ ಎಂದು ಯಾಕೆ ಹೇಳ್ತೀರಾ? ಪೂರಕ ಕಾರ್ಯಸೂಚಿ ಹಾಕಿದ್ದೇವೆ. ಕದ್ದು ಮುಚ್ಚಿ ಮಾಡುವ ಪ್ರಶ್ನೆಯೇ ಇಲ್ಲ. ನಿಮ್ಮ ವಿರೋಧ ಇದ್ದರೆ; ನೀವು ಚರ್ಚೆ ಮಾಡಿ. ಸರ್ಕಾರ ಕಳ್ಳತನದಿಂದ ಮಾಡುತ್ತಿಲ್ಲ ಎಂದ ಸಭಾಧ್ಯಕ್ಷರು, ಎಲ್ಲರ ಟೇಬಲ್ ಮೇಲೆ ಬಿಲ್ನ ಪ್ರತಿ ಇದೆ. ಕದ್ದುಮುಚ್ಚಿ ಎಂಬ ಮಾತನ್ನು ಡಿ.ಕೆ.ಶಿವಕುಮಾರ್ ಹಿಂದಕ್ಕೆ ಪಡೆಯಬೇಕು ಎಂದು ಹೇಳಿತ್ತು. ಯಾಕೆ ಈ ಬಿಲ್ ಅನ್ನು ಬೆಳಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ನಿನ್ನೆ ರಾತ್ರಿ ಕಾರ್ಯಸೂಚಿಯನ್ನು ಸಿದ್ಧಪಡಿಸುವಾಗ ಈ ಬಿಲ್ ಇನ್ನು ಪ್ರಿಂಟ್ ಆಗಿರಲಿಲ್ಲ. ಮುಂಜಾನೆ ಇದು ಪ್ರಿಂಟ್ ಆಗಿತ್ತು. ಅಲ್ಲದೆ, ಸರ್ಕಾರ ಸದನದಲ್ಲಿ ಬಿಲ್ ಅನ್ನು ಪ್ರಸ್ತಾಪಿಸಲು ಹೇಳಿದರು. ಅದರಂತೆ ಈಗ ಮಂಡನೆ ಮಾಡಲಾಗಿದೆ. ಈ ವಿಧೇಯಕವನ್ನು ಮಂಡಿಸಿರುವ ವಿಷಯದಲ್ಲಿ ನಿಮ್ಮದೆಯಾದ ಅಭಿಪ್ರಾಯವನ್ನು ಸದನದಲ್ಲಿ ವ್ಯಕ್ತಪಡಿಸಿದ್ದೀರಿ. ನಾನು ನಿಯಮಾವಳಿ ಪ್ರಕಾರ, ಈ ವಿಧೇಯಕವನ್ನು ಮಂಡಿಸಿದ್ದೇನೆ. ತಾ. ೨೨ ರಂದು (ಇಂದು) ಇದನ್ನು ಚರ್ಚೆಗೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಕರ್ನಾಟಕದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - ೨೦೨೧ ರ ಬಿಲ್ ಅನ್ನು ಡಿ.ಕೆ.ಶಿವಕುಮಾರ್ ಅವರು ಹರಿದು ಹಾಕಿದ್ದು ಸದನದಿಂದ ಸರಿಯಾದ ಸಂದೇಶ ಅಲ್ಲ ಎಂದ ಸಭಾಧ್ಯಕ್ಷರು, ವಿರೋಧ ಪಕ್ಷದ ಸಚೇತಕರನ್ನು ಕರೆದು ಈ ರೀತಿ ಅಜೆಂಡಾ ರೆಡಿ ಮಾಡಲಾಗಿದೆ. ನಿಮ್ಮ ನಾಯಕರ ಗಮನಕ್ಕೂ ತನ್ನಿ ಎಂದು ತಿಳಿಸಿದ್ದೆ. ಹೀಗಾಗಿ, ತಾ. ೨೨ ರಂದು ಈ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡುತ್ತೇನೆ. ಒಂದು ದಿನ ಮೊದಲೇ ನಿಮ್ಮ ಕೈಗೆ ಮಸೂದೆ ಸಿಗುವ ಹಾಗೆ ಮಾಡಿದ್ದೇನೆ. ನೀವು ನನ್ನನ್ನು ಅಭಿನಂದಿಸಬೇಕು ಎಂದು ಸಭಾಧ್ಯಕ್ಷರು ಹೇಳಿದರು. ಮತ್ತೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಈ ಸರ್ಕಾರ ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ. ಹಿಂಬಾಗಿಲಿನಿAದ ಅಧಿಕಾರಕ್ಕೆ ಬಂದಿದ್ದೀರಿ ಎಂದು ಜರಿದರು. ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ, ಸಭಾಧ್ಯಕ್ಷರು ರೂಲಿಂಗ್ ಕೊಟ್ಟ ಮೇಲೆ ಮತ್ತೆ ವಿಪಕ್ಷದ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಾಶ ಆಗಿದೆ ಎಂದು ಈಶ್ವರಪ್ಪ ಕುಟುಕಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.