ಶ್ರೀಮಂಗಲ, ನ. ೨: ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆನಷ್ಟದ ಸಮೀಕ್ಷೆಯ ವರದಿ ಇನ್ನೂ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ. ಮಳೆ ಮುಂದುವರೆದಿರುವುದರಿAದ ಬೆಳೆ ನಷ್ಟ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಸಂಬAಧಿಸಿದ ಇಲಾಖೆಯವರು ಸಮೀಕ್ಷಾ ವರದಿಯನ್ನು ನೀಡಲು ಕಾಲಾವಕಾಶ ಕೇಳಿದ್ದು, ಸಮೀಕ್ಷಾ ವರದಿ ಸಲ್ಲಿಕೆಯಾದ ನಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ತಿಳಿಸಿದ್ದಾರೆ.

ಕೊಡಗು ಬೆಳೆಗಾರರ ಒಕ್ಕೂಟದಿಂದ ಮಡಿಕೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಬೆಳೆನಷ್ಟಗೊಂಡಿರುವ ಜಿಲ್ಲೆಯ ಗ್ರಾಮಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಪರಿಹಾರ ಪಡೆದುಕೊಳ್ಳಲು ಬೆಳೆಗಾರರಿಂದ ಅರ್ಜಿ ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

ಕಳೆದ ವಾರ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮೌಖಿಕವಾಗಿ ಜಿಲ್ಲೆಯ ಬೆಳೆನಷ್ಟದ ಸಮೀಕ್ಷೆಯ ವರದಿಯನ್ನು ಕೇಳಲಾಗಿದ್ದು, ಈಗಾಗಲೇ ಜಿಲ್ಲೆಯ ೨೨ ಗ್ರಾಮಗಳಲ್ಲಿ ಹೆಚ್ಚಿನ ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

(ಮೊದಲ ಪುಟದಿಂದ) ಈಗಲೂ ಮಳೆ ಮುಂದುವರೆದಿರುವುದರಿAದ ಬೆಳೆ ನಷ್ಟ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಅಂತಿಮವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಸಂಬAಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಈ ಸಂದರ್ಭ ಬೆಳೆಗಾರರ ಒಕ್ಕೂಟದ ಪ್ರಮುಖರು, ಸತತ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟಗೊಂಡು ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೆಳೆಗಾರರಿಗೆ ಪ್ರಸಕ್ತ ವರ್ಷವೂ ಅತಿವೃಷ್ಟಿಯಿಂದ ಬೆಳೆ ನಷ್ಟ ಉಂಟಾಗಿದೆ. ನಿರಂತರ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ನಷ್ಟ ಉಂಟಾಗಿದೆ. ಪ್ರಸಕ್ತ ವರ್ಷದ ಬೆಳೆ ನಷ್ಟ ಸಮೀಕ್ಷೆಯನ್ನು ನಡೆಸಿ ಶೇ. ೩೩ರ ಮೇಲ್ಪಟ್ಟು ಬೆಳೆನಷ್ಟಗೊಂಡ ಪ್ರದೇಶದ ರೈತರುಗಳಿಗೆ ಪರಿಹಾರ ಒದಗಿಸಲು ತಾ. ೧೪.೦೯.೨೦೨೧ರಂದು ಆಗಿನ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿಯವರು ಕಾಫಿ ಮಂಡಳಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯೊಂದಿಗೆ ಕಂದಾಯ ಇಲಾಖೆಯು ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ್ದರು. ತಾವುಗಳು ಈ ಮೇಲಿನ ಸಮೀಕ್ಷಾ ವರದಿಯನ್ನು ಪರಿಶೀಲಿಸಿ ಬೆಳೆನಷ್ಟಗೊಂಡಿರುವ ಜಿಲ್ಲೆಯ ಗ್ರಾಮಗಳ ಹೆಸರನ್ನು ಪ್ರಕಟಿಸಿ ಆಯಾ ಗ್ರಾಮಗಳ ರೈತರು/ಬೆಳೆಗಾರರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆ ಪ್ರಸಕ್ತ ವರ್ಷ ಆಗಿದ್ದು, ಈಗಲೂ ಸಹ ಮಳೆ ಮುಂದುವರೆದಿದೆ. ಇದೇ ರೀತಿ ಮಳೆ ಇನ್ನೆರಡು ತಿಂಗಳು ಕಾಫಿ ಕಟಾವುವರೆಗೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ನಷ್ಟದ ಪ್ರಮಾಣ ಹೆಚ್ಚಾಗಲಿದೆ ಎಂದು ವಿವರಿಸಿದರು.

ಇದೇ ಸಂದರ್ಭ ತಾ. ೩೧.೧೦.೨೦೨೧ರವರೆಗೆ ಕೊಡಗು ಜಿಲ್ಲೆಯ ಮಳೆಯ ಪ್ರಮಾಣವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಹೋಬಳಿವಾರು ಸರಾಸರಿ ತೆಗೆದುಕೊಂಡರೆ ಹಲವು ಹೋಬಳಿಗಳಲ್ಲಿ ಕಳೆದ ವರ್ಷಕ್ಕಿಂತ ಶೇ. ೨೦ರಿಂದ ೩೦ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಬೆಳೆ ನಷ್ಟದ ಪ್ರಮಾಣವು ಹೆಚ್ಚಾಗಿರುವುದರಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಆದಷ್ಟು ಬೇಗ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಜಿ ಮಾಣೀರ ವಿಜಯ್ ನಂಜಪ್ಪ, ನಿರ್ದೇಶಕರುಗಳಾದ ಕೊಳೇರ ಭಾರತಿ, ಚೇಂದಿರ ಸುಮಿತಾಅಪ್ಪಣ್ಣ ಹಾಜರಿದ್ದರು.