ಗೋಣಿಕೊಪ್ಪಲು, ಸೆ. ೧೨: ರಕ್ತದಾನ ಎಂದೆAದಿಗೂ ಶ್ರೇಷ್ಠ ದಾನವೇ ಆದರೂ ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ರಕ್ತದ ಅವಶ್ಯಕತೆ ಅತೀ ಹೆಚ್ಚು ಇರುವಾಗ ರಕ್ತದಾನ ಅತ್ಯಂತ ಶ್ರೇಷ್ಠ ದಾನ ಎಂದು ಕುಟ್ಟ ವೃತ್ತ ನಿರೀಕ್ಷಕ ಸಿ.ಎ ಮಂಜಪ್ಪ ನುಡಿದರು. ಜೆ.ಸಿ.ಐ ಗೋಲ್ಡನ್ ಪೊನ್ನಂಪೇಟೆ ಮತ್ತು ಕುಟ್ಟದ ಅನುಗ್ರಹ ಹೆಚ್.ಪಿ. ಪೆಟ್ರೋಲಿಯಂ ಸಹಭಾ ಗಿತ್ವದಲ್ಲಿ ಕುಟ್ಟ ಆಸ್ಪತ್ರೆಯಲ್ಲಿ ಏರ್ಪಡಿಸ ಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರೋಗ್ಯವಂತರಿಗೆ ಮಾತ್ರ ರಕ್ತದಾನ ಮಾಡಲು ಅವಕಾಶವಿರುತ್ತದೆ. ಆದುದರಿಂದ ಮೊದಲು ಆರೋಗ್ಯವಂತರಾಗಿದ್ದರೆ ತಮ್ಮ ರಕ್ತ ನೀಡುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಲು ಸಾಧ್ಯ ಎಂದರು.

ಕೊಡಗು ಜಿಲ್ಲಾ ಬ್ಲಡ್ ಬ್ಯಾಂಕ್ ನ ಡಾ ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ಇಲ್ಲ. ಯಾವುದೇ ಔಷಧಿಯಿಂದ ರಕ್ತ ತಯಾರಿಸಲು ಸಾಧ್ಯವಿಲ್ಲ. ಅಲ್ಲದೆ ಅದನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಾನವನ ದೇಹದಿಂದ ರಕ್ತ ತೆಗೆದ ನಂತರ ನಿಗದಿತ ಅವಧಿಯ ಒಳಗೆ ಅದನ್ನು ವಿವಿಧ ಅಂಶಗಳಾಗಿ ಬೇರ್ಪಡಿಸಿ ಶೇಖರಿಸಿ ಡಬೇಕಾಗುತ್ತದೆ. ಅದಕ್ಕೂ ಜೀವಿತ ಕಾಲಾವಧಿ ಇರುತ್ತದೆ ಎಂದರು.

ಕುಟ್ಟ ಅನುಗ್ರಹ ಹೆಚ್.ಪಿ. ಪೆಟ್ರೋಲಿಯಂ ಮಾಲೀಕ ಚಂದನ್ ಕಾಮತ್ ಮಾತನಾಡಿ ತಾನು ಈ ವರ್ಷದಲ್ಲಿ ಆಯೋಜಿಸುತ್ತಿರುವ ಮೂರನೇ ರಕ್ತದಾನ ಶಿಬಿರ ಇದಾಗಿದ್ದು, ಕೊರೊನಾ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ ಎನ್ನುವುದನ್ನು ಮನಗಂಡು ಇಲ್ಲಿ ಈ ಶಿಬಿರವನ್ನು ನಡೆಸಲಾಗಿದ್ದು, ಸ್ಪಂದನೆ ದೊರೆತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಗೋಲ್ಡನ್ ಪೊನ್ನಂಪೇಟೆಯ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕಾಮತ್ ಗ್ರೂಪ್‌ನ ಎಂ.ಪಿ. ಕೇಶವ ಕಾಮತ್, ಕಾರ್ಯಕ್ರಮದಲ್ಲಿ ಜೆ.ಸಿ.ಐನ ನಿಕಟಪೂರ್ವ ಅಧ್ಯಕ್ಷ ಗಯಾ ಜೋಯಪ್ಪ, ಕಾರ್ಯಕ್ರಮ ಸಂಯೋಜಕ ಜೆ.ಸಿ. ಅಜಯ್, ಸಬ್ ಇನ್ಸಪೆಕ್ಟರ್ ಚಂದ್ರಪ್ಪ, ಪೊಲೀಸ್ ಸಿಬ್ಬಂದಿಗಳು, ಕಾಫಿ ಬೆಳಗಾರರಾದ ನೆಲ್ಲಿರ ನಟೇಶ್, ಚಕ್ಕೇರ ಗಣಪತಿ, ಎಸ್‌ಎನ್‌ಡಿಪಿ ಅಧ್ಯಕ್ಷ ಅರುಣ್ ಕಂದಪ್ಪ, ಚೌಕಿರ ಮೋಹನ್, ವಿನು, ಜೆ.ಸಿ.ಐನ ಮಾಜಿ ಅಧ್ಯಕ್ಷರುಗಳಾದ ಜೆ.ಸಿ. ಪವನ್, ಪುಳಂಗಡ ನಟೇಶ್, ಜೆಸಿರೆಟ್ ಅಧ್ಯಕ್ಷೆ ರಿಸ್ತಾ ಚಂಗಪ್ಪ, ಮಾಜಿ ಅಧ್ಯಕ್ಷೆ ಲೇಖಾ ನಟೇಶ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಟ್ಟ ವೃತ್ತ ನಿರೀಕ್ಷಕ ಸಿ.ಎ. ಮಂಜಪ್ಪ ತಾವೇ ಮೊದಲಿಗೆ ರಕ್ತದಾನ ಮಾಡಿದ್ದಲ್ಲದೆ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಗಳಿಂದ ರಕ್ತದಾನ ಮಾಡಿಸಿದರು. ಒಟ್ಟಾಗಿ ೩೫ ಮಂದಿ ರಕ್ತದಾನ ಮಾಡಿದರು.ಚಂದನ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಜೆ.ಸಿ. ಅಜಯ್ ವಂದಿಸಿದರು.